ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಡಿಸಿ ಮತ್ತು ಎಸ್ಪಿ
ಸುದ್ದಿಲೈವ್/ಶಿವಮೊಗ್ಗ
ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನ ಅಮಾನತ್ತು ಪಡಿಸಿ ಘಟನೆಯನ್ನ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಶಿವಮೊಗ್ಗದ ಗೋಪಿ ವೃತ್ತದಲ್ಲಿ ನಡೆದ ವಕೀಲರ ಪ್ರತಿಭಟನೆಗೆ ಮಣಿದು ಸ್ಥಳಕ್ಕೆ ಎಸ್ಪಿ ಮತ್ತು ಡಿಸಿ ಧಾವಿಸಿದ್ದಾರೆ. ವಕೀಲರ ಮನವಿ ಸ್ವೀಕರಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ಸುಮಾರು 3 ಗಂಟೆಗಳ ವರೆಗೆ ನಡೆದ ಪ್ರತಿಭಟನೆಯಲ್ಲಿ ಪಿಐ, ಡಿವೈಎಸ್ಪಿ, ಅಡಿಷನಲ್ ಎಸ್ಪಿ, ಅಪರ ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕರಿಸಲು ಮುಂದಾದರೂ ಮನವಿ ನೀಡದೆ ಎಸ್ಪಿ ಮತ್ತು ಡಿಸಿ ಸ್ಥಳಕ್ಕೆ ಬರಬೇಕೆಂದು ವಕೀಲರು ಬಿಗಿ ಪಟ್ಟು ಹಿಡಿದಿದ್ದರು.
ಗೋಪಿ ವೃತ್ತದಲ್ಲಿ ಮಾನವಿ ಸರಪಳಿ ರಚಿಸಿ ವಕೀಲರು ಪ್ರತಿಭಟನೆ ನಡೆಸಿದ್ದರು. ಡಿಸಿ ಮತ್ತು ಎಸ್ಪಿ ಸ್ಥಳಕ್ಕೆ ಬಾರದಿದ್ದರೆ ಅಮೀರ್ ಅಹ್ಮದ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮಂದಾಗಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಬಾರದಿದ್ದರೆ ಪ್ರತಿಭಟನೆ ಶಿಫ್ಟ್ ಆಗಿ ಪ್ರತಿಭಟನೆ ಕಿಚ್ಚು ಜೋರಾಗುವ ಮುನ್ಸೂಚನೆ ಕಂಡುಬಂದಿತ್ತು.
ತಕ್ಷಣವೇ ಎಸ್ಪಿ ಮತ್ತು ಡಿಸಿ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ನಮ್ಮ ವ್ಯಾಪ್ತಿಗೆ ಬಾರದ ಕಾರಣ ಮನವಿಯನ್ನ ಮೇಲಧಿಕಾರಿಗಳಿಗೆ ಫಾರ್ವರ್ಡ್ ಮಾಡಲಾಗುವುದು. ಈಗಾಗಲೇ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಾಗಿದೆ. ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಭರವಸೆ ನೀಡಿದರು.
ಎಸ್ಪಿ ಮತ್ತು ಡಿಸಿ ಮನವಿ ಸ್ವೀಕರಿಸಿ ಭರವಸೆ ನೀಡಿದ ಬೆನ್ನಲ್ಲೇ ವಕೀಲರ ಪ್ರತಿಭಟನೆ ಹಿಂಪಡೆಯಲಾಯಿತು. ವಕೀಲರಾದ ಶ್ರೀಪಾಲ್, ವೀರಭದ್ರಪ್ಪ ಪೂಜಾರ್, ಅನಿಲ್, ಶಿವಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ-https://suddilive.in/archives/4059