ಸ್ಥಳೀಯ ಸುದ್ದಿಗಳು

ಅರಣ್ಯ ಇಲಾಖೆ ಪ್ರಚಾರದ ಗೀಳಿಗೆ ಬಿದ್ದಂತೆ ಕಾಣುತ್ತಿದೆ-ಆರಗ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಗೃಹ ಸಚಿವ, ಹಿರಿಯ ಬಿಜೆಪಿ ಮುಖಂಡ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹುಲಿ ಉಗುರು ಹಾಗೂ ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಹಾಗೂ ಆ ಕುರಿತಾದ ಸದ್ಯದ ಚರ್ಚೆಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 1972 ರ ವನ್ಯಜೀವಿ ಕಾಯ್ದೆ ಹಿಂದಿನ ಪ್ರಕರಣ ಕೈ ಬಿಡಿ, ಇಲ್ಲಾ ಹುಲಿ ಕೊಂದುವ ಟಿಪ್ಪು ಸುಲ್ತಾನ್ ಫೊಟೋ ಮೇಲೆ ಕ್ರಮ ತೆಗೆದುಕೊಳ್ಳಬೇಕು, ನವಿಲುಗರಿ ಇಟ್ಟುಕೊಂಡು ಓಡಾಡುವ ಮುಸ್ಲಿಂ ಸಂತರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ವಾದಿಸಿದ್ದಾರೆ.

ಒಂದೆರಡು ದಿನಗಳಿಂದ ಹುಲಿ ಉಗುರು ಪೆಂಡೆಂಟ್ ಧರಿಸಿದ ವ್ಯಕ್ತಿಗಳ ಮನೆಯಲ್ಲಿ ಅರಣ್ಯ ಇಲಾಖೆ ಶೋಧ ಕಾರ್ಯ ಆರಂಭಿಸಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ಅನೇಕರ ಬಂಧನ ಮಾಡಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಕೆಲಸ ಆಗಿದೆ. ಕೆಲವರು ಇದನ್ನೇ ದಾಳವಾಗಿರಿಸಿಕೊಂಡು ಪೆಂಡೆಂಟ್ ಧರಿಸಿದ ಅನೇಕರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಹಾಗೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಪ್ರಚಾರದ ಗೀಳಿಗೆ ಬಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬಂಧನ ಮಾಡುತ್ತಿದ್ದಾರೆ. ನಾನೊಬ್ಬ ಮಲೆನಾಡಿಗನಾಗಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನೂರಾರು ವರ್ಷಗಳಿಂದ ಕಾಡು ಎಮ್ಮೆ, ಕೋಣ, ಜಿಂಕೆ ಕೊಂಬುಗಳನ್ನ ಮನೆಯಲ್ಲಿ ಅಲಂಕಾರಿಕ ವಸ್ತುಗಳನ್ನಾಗಿ ಇಟ್ಟಿರೋದನ್ನ ನಾವು ನೋಡಿದ್ದೇವೆ. ಹಿಂದೆ ಹುಲಿಯ ಉಗರು ತರಹ ವಸ್ತುಗಳನ್ನ ಕೆಲವರು ಮಾಡುತ್ತಿದ್ದರು. ಅದನ್ನು ಜನ ಕೊಂಡುಕೊಳ್ಳುತ್ತಿದ್ದರು. ಅದೇನೋ ಮಕ್ಕಳ ಕುತ್ತಿಗೆಗೆ ಹಾಕಿದರೆ ಧೈರ್ಯದ ಪ್ರತೀಕ ಎಂದು ಭಾವಿಸಿದ್ದರು. ಇತ್ತೀಚಿಗೆ ಶ್ರೀಮಂತರು ಅದನ್ನ ಚಿನ್ನದ ಸರದಲ್ಲಿ ಹಾಕಿಕೊಂಡು ಓಡಾಡುತ್ತಾರೆ. ಇದನ್ನ ಹಿಂದೆ ಮುಂದೆ ಯೋಚನೆ ಮಾಡದೆ ಅರಣ್ಯ ಅಧಿಕಾರಿಗಳು ಕ್ರಮ ಜರಗಿಸುತ್ತಿದ್ದಾರೆ. ವನ್ಯಜೀವಿ ಕಾಯ್ದೆ 1972ರ ಮೊದಲು ಇವುಗಳನ್ನೆಲ್ಲ ಅವರು ಪಡೆದುಕೊಂಡಿದ್ದರೆ, ಕ್ರಮ ಅನಗತ್ಯ.

ತೀರ್ಥಹಳ್ಳಿಯ ಹಣಗೆರೆ ಕಟ್ಟೆ ಎಂಬ ಸ್ಥಳದಲ್ಲಿ ಹಿಂದೂ ಮುಸ್ಲಿಂ ಐಕ್ಯತೆ ಮೆರೆವ ದರ್ಗಾ ಹಾಗೂ ದೇವಸ್ಥಾನಗಳು ಒಟ್ಟಿಗೆ ಒಂದೇ ಆವರಣದಲ್ಲಿವೆ. ಅಲ್ಲಿ ಮುಸ್ಲಿಂ ಸಂತರು ನವಿಲುಗರಿಯ ಕಟ್ಟು ಹಿಡಿದುಕೊಂಡು ಆಶೀರ್ವಾದ ಮಾಡುತ್ತಿರುತ್ತಾರೆ. ಈ ಸ್ಥಳಕ್ಕೆ ಮಂತ್ರಿ ಮಹೋದಯರೆಲ್ಲರೂ ಭೇಟಿ ನೀಡುತ್ತಾರೆ. ನವಿಲುಗರಿ ರಾಷ್ಟ್ರೀಯ ಪಕ್ಷಿಯ ವಸ್ತು ಎಂದು ಅವರನ್ನೆಲ್ಲಾ ಅರೆಸ್ಟ್ ಮಾಡಲು ಸಾಧ್ಯವಾ..?

ಟಿಪ್ಪು ಸುಲ್ತಾನ್ ಫೋಟೋ ನಾವು ನೋಡುವುದೇ ಹುಲಿ ಕೊಂದ ದೃಶ್ಯದಲ್ಲಿ. ಅದನ್ನ ನೋಡಿ ಪ್ರೇರಣೆಗೊಂಡು ಜನ ಹುಲಿ ಬೇಟೆಯಾಡಲು ಶುರು ಮಾಡಿದರೆ, ಟಿಪ್ಪು ಫೋಟೋಗಳನ್ನು ಯಾರೆಲ್ಲಾ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಅವರನ್ನೆಲ್ಲ ಅರೆಸ್ಟ್ ಮಾಡಲು ಸಾಧ್ಯನಾ.? ಅದು ವನ್ಯಜೀವಿ ಕಾಯ್ದೆ ವಿರುದ್ಧ.ನಾನು ಕಾನೂನಿನ ವಿರುದ್ಧ ಅಲ್ಲ.

ಅವುಗಳ ವಸ್ತುಗಳನ್ನ ಮಾರಾಟ ಮಾಡುವುದು ನಿಷಿದ್ಧ ಅದನ್ನ ನಾನು ಒಪ್ಪುತ್ತೇನೆ. ಆದರೆ ಅನಾದಿಕಾಲದಿಂದ ಉಳಿಸಿಕೊಂಡು ಬಂದಿರುವಂತಹ ಕೆಲ ವಸ್ತುಗಳನ್ನು ಬಿಡಬೇಕು. ಇಲ್ಲವಾದರೆ ಇವರನ್ನೆಲ್ಲ ಹಾಕಲು ಜೈಲು ಸಾಲುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಏಕಾಏಕಿ ಯಾರನ್ನೂ ಬಂಧನಕ್ಕೊಳಪಡಿಸಬಾರದು. ಹೀಗೆ ಮುಂದುವರಿದರೆ ಇಂತಹ ಅನೇಕ ಕುಟುಂಬಗಳ ಸದಸ್ಯರನ್ನೆಲ್ಲಾ ಜೈಲಿಗೆ ಹಾಕಬಹುದು ಎಂದು ಆರಗ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ-https://suddilive.in/archives/1933

Related Articles

Leave a Reply

Your email address will not be published. Required fields are marked *

Back to top button