ಬಡ್ಡಿ ವಿಚಾರದಲ್ಲಿ ಸಾಲಕೊಟ್ಟವರಿಂದ ಕಿರುಕುಳದ ಆರೋಪ-ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಭದ್ರಾವತಿ ತಾಲೂಕಿನ ಹಾಗಲಗ್ರಾಮದಲ್ಲಿ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆಗಾಗಿ ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪಡೆದ ಸಾಲಕ್ಕೆ ಬಡ್ಡಿ ಕಟ್ಟುವ ವಿಚಾರದಲ್ಲಿ ಸಾಲಕೊಟ್ಟವರಿಂದ ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿ ತಾಲ್ಲೂಕ್ ಸಿರಿಯೂರು ಅಂಚೆಯ ಹಾಗಲಮನೆ ಗ್ರಾಮದ ನಿವಾಸಿ ಮಂಜುಳಾ ಕೋಂ ಕೃಷ್ಣಪ್ಪ (48) ಎಂಬ ಮಹಿಳೆ ಸಾಲಗಾರರ ಕಾಟಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.ಹಾಗಲಮನೆ ಗ್ರಾಮದಲ್ಲಿ ಮಂಜುಳಮ್ಮ ತನ್ನ ಸೊಸೆ ವಿನುತಾ, ತಾಯಿ ಕಾಮಾಕ್ಷಮ್ಮ, ಮಗ ವಿಜಯಕುಮಾರರವರೊಂದಿಗೆ ವಾಸಗಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ತಮ್ಮ ಗ್ರಾಮದ ವಾಸಿ ವೇದಾವತಿ ಕೊಂ ಸ್ವಾಮಿರವರಿಂದ 5 ರೂ ಬಡ್ಡಿಯಂತೆ 1 ಲಕ್ಷ ರೂ. ಹಣವನ್ನು ಪಡೆದಿದ್ದರು.
ಬಡ್ಡಿಯ ಹಣ ಕಟ್ಟುವ ವಿಚಾರದಲ್ಲಿ ವೇದಾವತಿಯವರು ಹಾಗೂ ಇತರರು ಮಂಜುಳಾರವರ ಮನೆಗೆ ಬಂದು ಊರು ಚಾಕ್ರಿ ಮಾಡೋ ನಿಮ್ಮಂತವರಿಗೆ ಸುಮ್ಮನೆ ಬಿಡಲ, ಸರಿಯಾಗಿ ಬಡ್ಡಿಕಟ್ಟಲಿಲ್ಲ ಎಂದರೆ ನಿಮ್ಮ ಮನೆ ಬೀಗ ಹಾಕಿ ಪಾತ್ರೆ ಪಗಡ ಸಾಮಾನುಗಳನ್ನು ಹೊರಗೆ ಹಾಕಿ ಬೀದಿಯಲ್ಲಿ ನಿಲ್ಲಿಸಿ ಭಿಕ್ಷೆ ಬೇಡುಸ್ತೀನಿ, ಮನೆಗೆ ಬೆಂಕಿ ಹಚ್ಚುತ್ತೇವೆಂದು ಗದರಿಸಿ ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮಾನಸಿಕ ಹಿಂಸೆ ನೀಡಿ ಹಲ್ಲೆಗೆ ಮುಂದಾಗಿರುವುದರಿಂದ ಮಂಜುಳಮ್ಮ ಮತ್ತು ಅವರ ಕುಟುಂಬದವರು ಇಡೀ ರಾತ್ರಿ ಆತಂಕದಿಂದ ನೊಂದಿದ್ದು, ಫೆ.11 ರಂದು ಬೆಳಗ್ಗೆ ಸುಮಾರು 10-00 ಗಂಟೆಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಹೊಲದಲ್ಲಿ ವಿಷ ಸೇವಿಸಿ ಮಂಜುಳಮ್ಮ ಅಸ್ವಸ್ಥಳಾಗಿ ವಾಂತಿ ಮಾಡಿದ್ದಾರೆ. ಅವರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/9016