ವ್ಯಂಗ್ಯವಾಡಿದ ಆಯನೂರು ಮಂಜುನಾಥ್?
ಶಾಮನೂರು ಶಿವಶಂಕರಪ್ಪನವರು ಬಿ.ವೈ. ರಾಘವೇಂದ್ರ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿಕೊಳ್ಳಲಿ ಎಂದು ಆಯನೂರು ವ್ಯಂಗ್ಯವಾಡಿದ್ದರೂ ಶಾಮನೂರು ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕೆಂಬ ಹೇಳಿಕೆ ಹೊರಗೆ ಬೀಳಲೇ ಇಲ್ಲ. ಚುನಾವಣೆಯ ವೇಳೆ ಎದ್ದಿರುವ ಈ ವಿಷಯವನ್ನ ಮಾಧ್ಯಮಗಳ ಮುಂದೆ ಏನೋ ಹೇಳಿ ತಳ್ಳುವ ಪ್ರಯತ್ನ ನಡೆದಿದೆ ಎನ್ನಬಹುದು.
ಸುದ್ದಿಲೈವ್/ಶಿವಮೊಗ್ಗ
ಹಿರಿಯ ಶಾಸಕ, ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪನವರು ಬಿ.ವೈ.ರಾಘವೇಂದ್ರ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸವನ್ನು ಅಭಿವೃದ್ಧಿಯನ್ನು ಮಾಡಿಸಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದ ಬೆಕ್ಕಿನ ಕಲ್ಮಠದಲ್ಲಿ ನಡೆದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು, ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಹೇಳಿಕೆ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ತುಂಬ ಚಾಣಾಕ್ಷ ರಾಜಕಾರಣಿ, ಹಿರಿಯರು ಅವರ ಬಗ್ಗೆ ಅಪಾರ ಗೌರವವಿದೆ. ನಾವಿಬ್ಬರು ಒಟ್ಟಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದೆವು. ಸಂದರ್ಭವನ್ನು ನೋಡಿಕೊಂಡು ಮಾತನಾಡಿದ್ದಾರೆ. ಅವರಿಂದ ಅಚಾತುರ್ಯವಾಗಿದೆ ನಿಜ. ಮತ್ತೊಂದು ರೀತಿಯಲ್ಲಿ ಕಾಂಗ್ರೆಸ್ಗೆ ಲಾಭವು ಆಗಿದೆ. ಅವರ ಹೇಳಿಕೆಯಿಂದ ವೀರಶೈವರಲ್ಲದ ಹಿಂದುಳಿದ ವರ್ಗಗಳು ಜಾಗೃತಗೊಂಡಿವೆ. ಇದು ಕಾಂಗ್ರೆಸ್ಗೆ ಲಾಭವು ಆಗುತ್ತದೆ. ಬಹುಶಃ ಇದನ್ನು ಗಮನದಲ್ಲಿಟ್ಟುಕೊಂಡು ಶಾಮನೂರು ಅವರು ಬಿಜೆಪಿಗೆ ಒಳಹೊಡೆತ ಹೊಡಿದ್ದಿದ್ದಾರೆ ಎಂದಿದ್ದಾರೆ.
ನಿಮ್ಮ ಬಗ್ಗೆ ಕಾಂಗ್ರೆಸ್ನವರೇ ದೂರು ಕೊಟ್ಟಿದ್ದಾರಲ್ಲ ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ. ಅವರು ನಿಜವಾಗಿಯೂ ದೂರು ಕೊಡಬೇಕಾದದ್ದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದ ಹಿರಿಯರಿಗೆ.
ಅವರಿಗೆ ಉತ್ತರ ಕೊಡಲು ಅಥವಾ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು ಕೊಡಲು ಇವರಿಗೆ ತಾಕತ್ತಿಲ್ಲ. ನನ್ನ ಬಗ್ಗೆ ದೂರು ಕೊಡಲು ಹೋಗಿದ್ದಾರೆ. ಅವರಿಗೆ ಅವಮಾನ ಮಾಡುವಂತಹ ಮಾತನ್ನು ನಾನು ಆಡಿಲ್ಲ. ಹೈಕಮಾಂಡ್ ನನಗೆ ನೋಟೀಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದರು. ಆದರೆ, ಬೆಕ್ಕಿನಕಲ್ಮಠದ ಸಮಾರಂಭದಲ್ಲಿಯೇ ಅಧ್ಯಕ್ಷತೆ ವಹಿಸಿದ್ದ ಈ ಮಹಾನುಭವರು ಕೊನೆಪಕ್ಷ ಶಾಮನೂರು ಹೇಳಿಕೆಯನ್ನು ಅಲ್ಲಿಯೇ ಹೇಳಿ ಉತ್ತರ ನೀಡಬಹುದಿತ್ತು.
ನಂತರವಾದರೂ ಉತ್ತರ ನೀಡಬಹುದಿತ್ತು. ಅವರು ಬಾಯಿಯೇ ಬಿಡಲಿಲ್ಲ. ಒಟ್ಟಾರೆ ಅವರ ಹೇಳಿಕೆಯೊಂದು ಸಣ್ಣ ಅಚಾತುರ್ಯವಾಗಿದೆ. ಇದರಿಂದ ಕಾಂಗ್ರೆಸ್ಗೆ ಲಾಭವಾಗಿದೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ-https://suddilive.in/archives/8087