ನಕ್ಕುನಲಿದ ಬಿಎಸ್ ವೈ
ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದ ರಾಘವೇಂದ್ರರನ್ನ ಗೆಲ್ಲಿಸಿ ಎಂದು ಹೇಳಿರುವ ಹೇಳಿಕೆ ರಾಜ್ಯದ ರಾಜಕಾರಣದಲ್ಲಿ ಚರ್ಚೆ ಆರಂಭವಾಗಿದೆ.
ಚರ್ಚೆಯ ಮಧ್ಯೆಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಕ್ಕು ನಲಿದು ಸಂತೋಷ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ ಅವರು ಏನೋ ಮಂತ್ರವನ್ನ ಮಾಡಿದ್ದಾರೆ ಎಂದು ಹೇಳುವ ಮೂಲಕ ಹರ್ಷವನ್ನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ಮುಖಂಡ, ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಎಂಪಿ ಆಗಲಿ ಎಂದು ಹೇಳಿರುವುದು ಸ್ವಾಗತಾರ್ಹವಾಗಿದೆ. ಅವರು ಪಕ್ಷಬೇಧ ಮರೆತು ರಾಘವೇಂದ್ರರವರ ಒಳ್ಳೆಯ ಕೆಲಸವನ್ನ ಮೆಚ್ಚಿ ಆ ಮಾತನ್ನ ಹೇಳಿದ್ದಾರೆ. ಅವರಿಗೆ ಅಭಿನಂದನೆಯನ್ನ ತಿಳಿಸುತ್ತೇನೆ ಎಂದರು.
ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ವಾತಾವರಣ ಇದೆ. ಬಿಜೆಪಿ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿಗೆ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜೇಂದ್ರ ನೇಮಕ ಆದಾಗಿನಿಂದ ಮೊದಲ ಬಾರಿಗೆ ಕೋರ್ ಕಮಿಟಿ ಸಭೆ ಇದೆ. ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಬಿಎಸ್ ವೈ ಹೇಳಿಕೆ
ಸ್ನೇಹಿತರಾದ ಎಂಎಲ್ಸಿ ರುದ್ರೇಗೌಡ ಅವರ ವಿಶೇಷ ಅಭಿನಂದನಾ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾಳೆ ವಾಪಸ್ ಮೈಸೂರಿಗೆ ಹೋಗ್ತೇನೆ. ಎಲ್ಲಾ ಕಡೆ ಬಿಜೆಪಿ ಪರ ವಾತಾವರಣ ಇದೆ. 28 ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲವು ಖಚಿತ ಎಂದಿದ್ದಾರೆ.
28 ಸ್ಥಾನಕ್ಕೆ 28 ಸ್ಥಾನವನ್ನ ಪ್ರಧಾನಿಯವರಿಗೆ ಗಿಫ್ಟ್ ಆಗಿ ಕೊಡಬೇಕು ಎಂಬುದು ನಮ್ಮ ಅಪೇಕ್ಷೆಯಿದೆ. ಸಾವಿರಾರು ಜನ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಲಕ್ಷಣ್ ಸವದಿ- ರೆಡ್ಡಿ ವಿಚಾರ.
ಲಕ್ಷ್ಮಣ್ ಸವದಿ ಮತ್ತು ಜನಾರ್ಧನ್ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆ ಕುರಿತು ನಾನಿನ್ನು ಮಾತನಾಡಿಲ್ಲ. ಅವರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ. ತಿಳಿದುಕೊಂಡು ಮಾತಾಡ್ತೀನಿ ಎಂದರು.
ಮಂಡ್ಯದಲ್ಲಿ ಯಾರು?
ಮಂಡ್ಯ ಲೋಕಸಭಾ ಚುನಾವಣೆಗೆ ಸುಮಲತಾ ಅಥವಾ ಬೇರೆ ಅಭ್ಯರ್ಥಿ ಸ್ಪರ್ಧಿಸುತ್ತಾರೋ ಎಂಬ ಹೇಳಿಕೆಗೆ ಬಿಎಸ್ ವೈ ಪ್ರತಿಕ್ರಿಯಿಸಿದ್ದು, ಇನ್ನೂ ಯಾವುದೇ ಚರ್ಚೆಯಾಗಿಲ್ಲ.ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಷ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/7821