ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಬೇಳೂರು ಅಸಮಾಧಾನ-ಮಾಜಿ ಸಿಎಂ ಮಕ್ಕಳಿಗೆ ಸಚಿವ ಸ್ಥಾನ ಕೊಟ್ಟರೆ ನಾವೇನು ಮಾಡ್ಬೇಕು?

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ರಾಜಕಾರಣ ನಿಂತ ನೀರಲ್ಲ ಅದು ಹರಿಯುವ ನೀರು. ಹೆಚ್.ಡಿ ಕುಮಾರ ಸ್ವಾಮಿಯವರು ಸಹ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ.ಸರ್ಕಾರ ಬೀಳಿಸುವ ತಾಕತ್ತು,ಶಕ್ತಿ ಅವರಿಗಿಲ್ಲ ಎಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಬೇಳೂರು ಗುಡುಗಿದ್ದಾರೆ.
ಅವರು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿ ಮಾಡಲು ವಿಜಯೇಂದ್ರ ಬಂಡವಾಳ ಹೊಡಿದ್ದರು. ಕಾಂಗ್ರೆಸ್ ಮೂರು ಬಾಗಿಲು ಆದ್ರೆ ,ಬಿಜೆಪಿ ಆರು ಬಾಗಿಲು ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಗೆ ಮಾನ, ಮರ್ಯಾದೆ ಇದೆಯಾ? ಎಂದು ಗುಡುಗಿದ್ದಾರೆ.
ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರಲ್ಲ ಅಂತ ಹೇಳಿದ್ರು, ಈಗ ಎಲ್ಲಿ ಹೋಗಿದ್ದಾರೆ ನಳೀನ್? ಆಪರೇಷನ್ ಕಮಲ ಬಿಜೆಪಿಯವರ ಹುಚ್ಚು ಕನಸು.ಇವರ ಯೋಗ್ಯತೆಗೆ ಯಡಿಯೂರಪ್ಪನವರ ಸಾರಥ್ಯ ಇದ್ರೂ ಎಷ್ಟು ಗೆದ್ದರು? ಚಾಲೆಂಜ್ ಮಾಡ್ತೇನೆ. ನಮ್ಮ ಸರ್ಕಾರನಾ ಬೀಳಿಸಲಿ ನೋಡೋಣ ಎಂದು ಸವಾಲು ಎಸೆದಿದ್ದಾರೆ.
ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಿಲ್ಲ
ಬಿಜೆಪಿಗೆ ಮಾನ ಮರ್ಯಾದೆ ಇದ್ದಿದ್ದರೆ ವಿಧಾನ ಸಭೆಯಲ್ಲಿ ವಿರೋದ ಪಕ್ಷದ ನಾಯಕರನ್ನ ಮಾಡುತ್ತಿದ್ದರು. ಕೆಲವೊಂದಿಷ್ಟು ಜನರಿದ್ದಾರೆ ಸಿ.ಪಿ.ಯೋಗೇಶ್ವರ್ , ರಮೇಶ್ ಜಾರಕಿಹೊಳಿ ಅಂತವರು ಹೀಗೆ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಅಮಿತ್ ಷಾ ಗೆ ಕರ್ನಾಟಕ ದಲ್ಲಿ ಚೆಂಜ್ ಮಾಡ್ತೇವೆ ಅಂತ ಹೇಳಿ ಬಂದಿದ್ದಾರೆ. ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಬೆಂಬಲದಿಂದ ಮುಖ್ಯಮಂತ್ರಿ ಆದವರು. ಪಕ್ಷ ಬೀಳಿಸಲು ಸಣ್ಣ ಷಡ್ಯಂತರ ನಡಿದಿದೆ. ನಮ್ಮ ಪಕ್ಷದ ನಾಯಕರಿಗೆ 50 ಕೋಟಿ ಆಫರ್ ನೀಡುತ್ತಿದ್ದಾರೆ.ನೂರು ಕೋಟಿ ಕೊಟ್ಟರೂ ಯಾರು ಹೋಗಲ್ಲ.ಈ ಹಿಂದೆ 17 ಜನ ಹೋಗಿ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲಿ ಐಟಿ ದಾಳಿಗಳು ಕಾಂಗ್ರೆಸ್ ನವರ ಮೇಲೆ ಮಾತ್ರ ನಡೆಯುತ್ತೆ.ಯಡಿಯೂರಪ್ಪ ನವರ ಆಪ್ತನ ಮನೆ ಮೇಲೆ ಐಟಿ ದಾಳಿ ಆಗಿತ್ತು. ಆ ಅರವತ್ತು ಕೋಟಿ ಎಲ್ಲಿ ಹೋಯ್ತು? ನನ್ನ ರಕ್ತದಲ್ಲಿ ನಾನು ಬರೆದು ಕೊಡ್ತೇನೆ ಇನ್ನೂ ಐದು ವರ್ಷ ನಮ್ಮದೇ ಸರಕಾರ. ಎಂದು ಬಿಎಸ್ ವೈಗೆ ಟಾಂಗ್ ನೀಡಿದಂತೆ ಶಪಥ ಮಾಡಿದರು.
ಎರಡು ವರೆ ವರ್ಷ ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ
ನಾನು ಬಿಜೆಪಿಯಲ್ಲಿ ರೆಬಲ್ ಆಗಿ 50 ಶಾಸಕರನ್ನು ಎತ್ತುಕೊಂಡು ಹೋಗಿದ್ದೆ. ಯಡಿಯೂರಪ್ಪ ನವರನ್ನು ಆಟ ಆಡಿಸಿದ್ದು ನೀವು ನೋಡಿದ್ದಿರ. ನಿಮಗೆ ಯೋಗ್ಯತೆ ಇದ್ರೆ ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ. ಈಡಿಗ ಸಿಎಂ ಆಗ್ತಾರೆ, ದಲಿತ ಸಿಎಂ ಆಗಬೇಕು ಅಂತ ಕೇಳ್ತಾರೆ.ಎರಡೂವರೆ ವರ್ಷದ ನಂತರ ಅಧಿಕಾರದ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು
ಪ್ರತಿಯೊಬ್ಬ ಶಾಸಕನಿಗೂ 20 ತಿಂಗಳ ಅಧಿಕಾರ ಫಿಕ್ಸ್ ಮಾಡಿ
ಪ್ರತಿಯೊಬ್ಬ ಶಾಸಕರಿಗೂ 20 ತಿಂಗಳು ಅಧಿಕಾರ ಹಂಚಿಕೆ ಮಾಡಿ ಎಂದು ಸಲಹೆ ನೀಡಿದ ಬೇಳೂರು, ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ತಾ ಹೋದರೆ ನಾವು ಏನು ಮಾಡಬೇಕು ಎಂದು ಗುಡುಗಿದ್ದಾರೆ.
ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಮಂತ್ರಿ ಮಕ್ಕಳಿಗೆ ಯಾಕೇ ಅಧಿಕಾರ ಕೊಡಬೇಕು? ನಮಗೂ ಕೊಡಿ. ನಾನು ಮೂರು ಸಲ ಶಾಸಕನಾಗಿದ್ದೇನೆ.ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ವೋ ನನಗೆ ಗೊತ್ತಿಲ್ಲ. ನಮ್ಮನ್ನ ಜಿಲ್ಲಾ ಉಸ್ತುವಾರಿ ಗಳು ಎಲ್ಲೂ ಕರೆಯುತ್ತಿಲ್ಲ. ನಾನು ಎಲ್ಲಿಗೂ ಹೋಗಲ್ಲ. ಯಾರನ್ನ ಇಟ್ಟುಕೊಂಡು ಗೆದ್ದು ಬಂದಿಲ್ಲ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗೆದ್ದು ಬಂದಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ನವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಂಸದ ರಾಘವೇಂದ್ರರನ್ನ ಎದುರಿಸಲು ಬೇಳೂರಿಗೆ ಮಾತ್ರ ಸಾಧ್ಯ
ಸರ್ಕಾರದ ಮೇಲೆ ಅಸಮಧಾನ ಇಲ್ಲ. ಬಹಿರಂಗವಾಗಿ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಲೋಕಸಭೆಗೆ ಅವರು ಯಾರೋ ನಿಂತಕೊಳ್ತಾರೆ ಅಂದ್ರೆ ನನಗೆ ಗೊತಿಲ್ಲ. ಅವರು ಎಲ್ಲು ಓಡಾಡಲ್ಲಿಲ್ಲ.ರಾಘವೇಂದ್ರ ಅವರನ್ನು ಯಡಿಯೂರಪ್ಪ ನವರನ್ನು ಎದರಿಸಲು ಬೇಳೂರಿಗೆ ಮಾತ್ರ ಸಾಧ್ಯವೆಂದು ಗುಡುಗಿದ್ದಾರೆ.
ಮಧು ಬಂಗಾರಪ್ಪರಿಂದ ಗೆದ್ದಿಲ್ಲ
ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ ಇಲ್ವೋ ಗೊತ್ತಿಲ್ಲ. ಬಂದ್ರೆ ಭೀಮಣ್ಣ ನಾಯ್ಕರನ್ನ ಕರ್ಕೊಂಡು ಬರ್ತಾರೆ. ನಮಗೆ ಕರೆಯಲ್ಲ ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯ ಇಲ್ಲ. ನನ್ನ ಗೆಲ್ಲಿಸಿದ್ದು ಮಧು ಬಂಗಾರಪ್ಪ ಅಲ್ಲ ಎಂದು ಗುಡುಗಿದರು.
ನಾನು ಒಂಟಿ ಸಲಗ ಅಲ್ಲ.ಸಿದ್ದರಾಮಯ್ಯ ಇದ್ದಾರೆ, ಡಿಕೆಶಿ ಇದ್ದಾರೇ ನನ್ನ ಜೊತೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹುಲಿ ಉಗುರ ವಿಚಾರ
ಬಿಜೆಪಿಯವರು ಹುಲಿ ಉಗುರಿಗೂ ಹಿಂದುತ್ವ ಸೇರಿಸುತ್ತಿದ್ದಾರೆ. ಆರಗ ಜ್ಞಾನೇಂದ್ರ ಗೆ ಬುದ್ದಿ ಇಲ್ಲ. ಬರೇ ತಲೆ ಹರಟೆ ಜಾಸ್ತಿ… ಸವದಿ ಅವರ ಮನೆಗೂ ಅರಣ್ಯ ಇಲಾಖೆಯವರು ಹೋಗಿದ್ದಾರೆ.ಇದರಲ್ಲಿ ಪಕ್ಷ ಎಲ್ಲಿಂದ ಬಂತು ಎಂದು ಶಾಸಕರು ಪ್ರಶ್ನಿಸಿದ್ದಾರೆ
ಇದನ್ನೂ ಓದಿ-https://suddilive.in/archives/2049
