ಶೈಕ್ಷಣಿಕ ಸುದ್ದಿಗಳು

ಈ ಶಾಲಾ ಮಕ್ಕಳಿಗೆ ಇಲ್ಲ ಬಿಸಿಯೂಟದ ಭಾಗ್ಯ!

ಬಿಸಿಯೂಟದ ಭಾಗ್ಯ ಈ ಶಾಲಾ ಮಕ್ಕಳಿಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಇದ್ದರೂ‌ ಕಳೆದ 7-8 ತಿಂಗಳಿಂದ ಈ ಮಕ್ಕಳು ಬಿಸಿಯೂಟದಿಂದ ವಂಚಿತರಾಗಿದ್ದಾರೆ. 

ಸುದ್ದಿಲೈವ್/ಶಿವಮೊಗ್ಗ

ಯಾರೊಬ್ಬರು ಕೂಡಾ ಹಸಿವಿನಿಂದ ಇರಬಾರದು, ಬಡ ಮಕ್ಕಳಿಗು ಊಟ ಸಿಗಬೇಕು ಎಂಬ ಉದ್ದೇಶದಿಂದ ಸರಕಾರ ಸರಕಾರಿ‌ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿ ಮಾಡಿದೆ. ಅಷ್ಟೇ ಅಲ್ಲ ಊಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಸಹ ವಿತರಣೆ ಮಾಡ್ತಿದೆ. ಇನ್ನು ಮುಂದಿನ ತಿಂಗಳಿನಿಂದ ರಾಗಿ ಮಾಲ್ಟ್ ಕೊಡಲು ಸಹ ಸರಕಾರ ನಿರ್ಧರಿಸಿದೆ.

ಆದರೆ ವಿಷಯ ಏನು ಅಂದ್ರೆ ಇಷ್ಟೆಲ್ಲಾ ಸೌಲಭ್ಯದಿಂದ ಈ ಸರಕಾರಿ ಶಾಲೆ ಮಕ್ಕಳು ವಂಚಿತರಾಗಿದ್ದಾರೆ. ಹೌದು ಶಿವಮೊಗ್ಗದ ಸೋಮಿನಕೊಪ್ಪದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಇದೆ. ಈ ಶಾಲೆ ಈ ಮೊದಲು ಲಷ್ಕರ್ ಮೊಹಾಲ್ಲಾದಲ್ಲಿ ಕಾರ್ಯ ನಿರ್ವಹಿಸುತಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಸೋಮಿನಕೊಪ್ಪಕ್ಕೆ ಶಿಫ್ಟ್ ಆಗಿದೆ.

ಈ ಶಾಲೆ ಲಷ್ಕರ್ ಮೊಹಾಲ್ಲಾದಲ್ಲಿ ಇದ್ದಾಗ ಬಿಸಿಯೂಟ ವಿತರಣೆ ಆಗುತಿತ್ತು. ಆದರೆ ಇದೀಗ ಸೊಲಮಿನಕೊಪ್ಪದಲ್ಲಿ ಎರಡೂವರೆ‌ ಮೂರು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಅಲ್ಲಿಗೆ ಶಿಫ್ಟ್ ಆಗಿದೆ. ಆದರೆ ಶಾಲಾ ಕಟ್ಟಡ ‌ನಿರ್ಮಾಣ ಮಾಡುವ ವೇಳೆ ಅಧಿಕಾರಿಗಳು, ಗುತ್ತಿಗೆದಾರರು ಅಡುಗೆ ಮನೆ ನಿರ್ಮಾಣ ಮಾಡಿಲ್ಲ. ಅಡುಗೆ ಮನೆ ಇಲ್ಲದ ಕಾರಣ ಬಿಸಿಯೂಟ ಯೋಜನೆ ಇಲ್ಲದಾಗಿದೆ.

ಅಲ್ಲದೇ ಲಷ್ಕರ್ ಮೊಹಾಲ್ಲಾದಲ್ಲಿ ಇದ್ದಾಗ ಈ ಶಾಲೆಗೆ ಅಲ್ಪಸ್ವಲ್ಪ ಆಟದ ಮೈದಾನವಾದರು ಇತ್ತು. ಆದರೆ ಸೋಮಿನಕೊಪ್ಪ ಶಾಲೆಗೆ ಆಟದ ಮೈದಾನವು ಇಲ್ಲ, ಬಿಸಿಯೂಟವು ಇಲ್ಲ. ಕಳೆದ 7-8 ತಿಂಗಳಿನಿಂದ ಈ ಶಾಲೆಯ ಮಕ್ಕಳು ಬಿಸಿಯೂಟದಿಂದ ವಂಚಿತರಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲೇ ಈ ಶಾಲೆ ಕಾರ್ಯ ನಿರ್ವಹಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳು ಬಿಸಿಯೂಟದಿಂದ ವಂಚಿತರಾಗಿದ್ದಾರೆ.

ಮಕ್ಕಳು ಬಿಸಿಯೂಟದಿಂದ ವಂಚಿತರಾಗಲು ಮತ್ತೊಂದು ಕಾರಣ ಈ ಶಾಲೆಗೆ ಖಾಯಂ ಮುಖ್ಯ ಶಿಕ್ಷಕರು ಇಲ್ಲದಿರುವುದು. ಇದ್ದ ಖಾಯಂ ಮುಖ್ಯ ಶಿಕ್ಷಕರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ವಿಸ್ತರಣಾಧಿಕಾರಿ ಹುದ್ದೆಗೆ ವರ್ಗಾವಣೆ‌ ತೆಗೆದುಕೊಂಡು ಹೋಗಿದ್ದಾರೆ. ಈಗಾಗಿ ಪ್ರಭಾರಿ ಮುಖ್ಯ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ಈ ಪ್ರಭಾರಿ ಮುಖ್ಯ ಶಿಕ್ಷಕರು ವಾರದಲ್ಲಿ ಒಂದೆರಡು ಬಾರಿ ಬಂದು ಸಹಿ ಮಾಡಿ ಹೋಗುತ್ತಾರೆ. ಬಿಸಿಯೂಟ ಯೋಜನೆ ಜಾರಿಗೆ ಯಾವುದೇ ಪ್ರಯತ್ನ ನಡೆಸಿಲ್ಲ. ಈಗಾಗಿ ಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ.

ಅಂದ ಹಾಗೆ ಈ ಶಾಲೆಯಲ್ಲಿ ಏನು ಶ್ರೀಮಂತರ ಮಕ್ಕಳು ವ್ಯಾಸಂಗ ಮಾಡ್ತಿಲ್ಲ. ಬಡವರು, ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿದ್ದಾರೆ. ಕೆಲವು ಮಕ್ಕಳು ಮನೆಯಿಂದ ಊಟ ತೆಗೆದುಕೊಂಡು ಬಂದು ಊಟ ಮಾಡಿದರೇ, ಇನ್ನು ಎಷ್ಟೋ ಮಕ್ಕಳು ಊಟವನ್ನೇ ತರುವುದಿಲ್ಲ. ಮಾತೆತ್ತಿದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಪರ ಅಂತಾರೆ. ಆದರೆ ಅಲ್ಪಸಂಖ್ಯಾತರ ಮಕ್ಕಳೇ ಸರಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/6581

Related Articles

Leave a Reply

Your email address will not be published. Required fields are marked *

Back to top button