ಹೊನ್ನಾಳಿ ತಾಲೂಕು ರೈತರ ಜಮೀನಿಗೆ ನೀರು-ಶಿವಮೊಗ್ಗ ತಾಲೂಕು ರೈತರಿಂದ ಆಕ್ಷೇಪ
ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಗಡಿ ಅಂಚಿನಲ್ಲಿರುವ ಹೊಸಕೆರೆಯಿಂದ ಹೊನ್ನಾಳಿ ತಾಲೂಕು ರೈತರ ತೋಟ ಮತ್ತು ಜಮೀನಿಗಳಿಗೆ ಅಲ್ಲಿನ ಶಾಸಕರೇ ಕುದ್ದು ನಿಂತು ನೀರು ಬಿಡಿಸಿರುವುದು ಶಿವಮೊಗ್ಗ ತಾಲೂಕಿನ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಶಿವಮೊಗ್ಗ ತಾಲೂಕಿನ ರಟ್ಟೆಹಳ್ಳಿಯಲ್ಲಿ ಬರುವ ಹೊಸಕೆರೆಯಿಂದ ಮಾ.1 ರಿಂದ 10 ದಿನಗಳ ಕಾಲ ಸವಳಂಗದ ರೈತರ ಜಮೀನು ತೋಟಗಳಿಗೆ ನೀರು ಬಿಡಬೇಕೆಂದು ಈ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ನೀರು ಬಿಡದ ಕಾರಣ ನಿನ್ನೆ ಹೊನ್ನಾಳಿ ಶಾಸಕ ಶಾಂತನಗೌಡರು ಬೆಳಿಗ್ಗೆ ಬಂದು ಕೆರೆಯ ಗೇಟನ್ನ ತೆರೆಸಿದ್ದಾರೆ ಎಂದು ಶಿವಮೊಗ್ಗ ತಾಲೂಕ ರೈತರು ದೂರಿದ್ದಾರೆ.
ಈ ದೂರನ್ನ ತಾಲೂಕಿನ ರೈತರು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಬಳಿ ಕೊಂಡೊಯ್ದಿದ್ದಾರೆ. ಇದಕ್ಕೆ ಪತ್ರ್ಯುತ್ತರವಾಗಿ ಶಾಸಕಿ ಪೂರ್ಯನಾಯ್ಕ್ ಹೊನ್ನಾಳಿ ಶಾಸಕರಿಗೆ ಮೊಬೈಲ್ ಕರೆ ಮಾಡಿದ್ದಾರೆ. ಕುಡಿಯಲು ನೀರಿಲ್ಲ ಅದರೆ ಜಮೀನುಗಳಿಗೆ ನೀರು ಹರಿಸುತ್ತಿದ್ದೀರ. ಮತ್ತೊಮ್ಮೆ ಕುಳಿತು ಎರಡು ಭಾಗದ ರೈತರು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ. ಆದರೂ ಶಾಸಕರು ಬಂದು ರೈತರ ಜಮೀನಿಗೆ ನೀರು ಹರಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬಿರು ಬಿಸಿಲಿನಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಇದು ನೀರಿನ ಆಹಾಕಾರದ ಮುಂನ್ಸೂಚನೆ ಇರಬಹುದಾ ಎಂಬ ಅನುಮಾನಕ್ಕೂ ಈ ಘಟನೆ ಸಾಕ್ಷಿಯಾಗಿದೆ. ನಮ್ಮ ಜಿಲ್ಲೆಯ ರೈತರಿಗೆ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿದ್ದರೆ ಪಕ್ಕದ ಜಿಲ್ಲೆಯ ರೈತರಿಗೆ ಜಮೀನಿನ ಸಮಸ್ಯೆ ಎದ್ದು ಕಾಣುತ್ತಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂಬ ನಿರ್ಣಯವಿದ್ದರೂ ಜಮೀನಿಗೆ ನೀರು ಹರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸಧ್ಯಕ್ಕೆ ಹೊಸಕೆರೆಯಿಂದ 10 ದಿನಗಳ ಕಾಲ ನೀರು ಹರಿಸಬೇಕೆಂಬ ನಿರ್ಣಯಕ್ಕೆ ಬ್ರೇಕ್ ಬಿದ್ದಿದೆ. ಜಮೀನಿಗೆ ಕೆರೆಯ ನೀರು ಹರಿಸುವುದನ್ನ ಸ್ಥಗಿತಗೊಳಿಸಲಾಗಿದೆ. ನಾಳೆ ಮತ್ತೆ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಈ ಕೆರೆಯಿಂದ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ 30 ಗ್ರಾಮಗಳಿಗೆ ನೀರು ಹಂಚಿಕೆಯಾಗಲಿದೆ. ಈ ಕೆರೆಯಿಂದ ತಿಂಗಳಿಗೆ 10 ದಿನ ನೀರು ಹರಿಸುವಂತೆ ಈ ಹಿಂದೆ ಸಣ್ಣ ನೀರಾವರಿ ಇಲಾಖೆಯ ಸಭೆಯಲ್ಲಿ ತೀರ್ಮಾನವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ-https://suddilive.in/archives/9976