ಅಮಾನತ್ತು ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ಡಿಎಸ್ ಎಸ್ ಪ್ರತಿಭಟನೆ
ಸುದ್ದಿಲೈವ್/ಶಿವಮೊಗ್ಗ
ಪ್ರೊ|| ಸುರೇಶ್ ಎಂ ಮತ್ತು ಎಂ. ಕರಿಯಪ್ಪ ಇವರ ಅಮಾನತ್ತು ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇಂದು ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಸುರೇಶ್ ಎಂ ಹಾಗೂ ಶಾಖಾಧಿಕಾರಿಯಾಗಿರುವ ಶ್ರೀ ಎಂ. ಕರಿಯಪ್ಪ ಇವರನ್ನು ಯಾವುದೇ ಆರೋಪಗಳಿಲ್ಲದಿದ್ದರು ಈಗಾಗಲೇ ಮುಗಿದು ಹೋಗಿರುವ ಪ್ರಕರಣದ ನೆಪ ಮಾಡಿಕೊಂಡು ಪರಿಶಿಷ್ಟ ಜಾತಿಯ ನೌಕರರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಮಾನತ್ತು ಮಾಡಿರುವುದನ್ನ ಖಂಡಿಸಿ ಪ್ರತಿಭಟಿಸಲಾಯಿತು.
ಡಾ. ಸುರೇಶ್ ಎಂ. ಇವರು ಸ್ನಾತಕೋತ್ತರ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ರಾಗಿದ್ದರು. ಇವರನ್ನು ನಿಯೋಜನೆ ಮೇರೆಗೆ ಮಾನವ ಸಂಪನ್ಮೂಲ ವಿಭಾಗಕ್ಕೆ ಸಂಭಾವನೆರಹಿತವಾಗಿ ಹಾಗೂ ವಿಭಾಗದ ಕೆಲಸ ಕಾರ್ಯಗಳೊಂದಿಗೆ ಉಪಕುಲಸಚಿವರಾಗಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲು ವಿಶ್ವವಿದ್ಯಾನಿಲಯವು ಆದೇಶಿಸಿತ್ತು. ಆದೇಶದ ಅನ್ವಯ ನಿಯಮಾನುಸಾರವಾಗಿ ಡಾ. ಸುರೇಶ್ ಎಂ. ಇವರು ಕಾರ್ಯನಿರ್ವಹಿಸಿರುತ್ತಾರೆ.
ಶ್ರೀ ಎಂ. ಕರಿಯಪ್ಪನವರ ವಿಚಾರವಾಗಿ ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಸತ್ಯಶೋಧನೆ ಸಮಿತಿಯು ಓ.ಬಿ.ಸಿ ಘಟಕದಲ್ಲಿ ಸಾಬೀತಾಗದೇ ಇತ್ಯಾರ್ಥಪಡಿಸಲಾಗಿರುವ ವಿಚಾರವಾಗಿರುತ್ತದೆ. ಆದಾಗ್ಯೂ ಶಶಿಧರ ನೆಲ್ಲಿಸರ್ ಎಂಬ ವ್ಯಕ್ತಿಯಿಂದ ಲಿಖಿತ ದೂರನ್ನು ಪಡೆದು ತಾವು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಮಿತಿಯನ್ನು ರಚಿಸಿ ವರದಿ ಪಡೆಯಲಾಗಿದೆ.
ವರದಿಯಲ್ಲಿ ಎಂ. ಕರಿಯಪ್ಪ ಹಾಗೂ ಡಾ. ಸುರೇಶ್. ಎಂ. ಇವರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ದಾಖಲೆಗಳು ಇದ್ದಲ್ಲಿ ಸದರಿ ದಾಖಲೆಗಳನ್ನು ಸಂಬಂಧಿಸಿದವರಿಗೆ ಒದಗಿಸಿ ನಂತರ ನೋಟೀಸನ್ನು ನೀಡಿ ಈ ಬಗ್ಗೆ ಸಮಜಾಯಿಷಿ ಪಡೆಯುವುದು ನಿಯಮವಾಗಿದೆ.
ಕೆಲ ಸಂಘಟನೆಗಳು ಕುಲಪತಿಗಳ ಮೇಲೆಯೇ ಸುಳ್ಳು ಜಾತಿ ಪ್ರಮಾಣ ಪತ್ರದ ಆರೋಪ ಮಾಡಿದ್ದರೂ ಕ್ರಮ ಕೈಗೊಳ್ಳದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನೌಕರರಾದ ಡಾ.ಸುರೇಶ್ ಮತ್ತು ಕರಿಯಪ್ಪನವರನ್ನಉದ್ದೇಶ ಪೂರಕವಾಗಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ಅಮಾನತ್ತು ಅಧಿಕಾರಿಗಳ ಆದೇಶ ಹಿಂಪಡಿಸಬೇಕು ಎಂದು ಕೋರಲಾಗಿದೆ.
ಇದನ್ನೂ ಓದಿ-https://suddilive.in/archives/9104