ಫೆ.24 ರಂದು ಗ್ಯಾರೆಂಟಿ ಸಮಾವೇಶ-ಮಧು ಬಂಗಾರಪ್ಪ
ಸುದ್ದಿಲೈವ್/ಶಿವಮೊಗ್ಗ
ಗ್ಯಾರೆಂಟಿ ಮೇಲೆಯೇ ಬಂದ ಕಾಂಗ್ರೆಸ್ ಸರ್ಕಾರ ಈಗ ಮತ್ತೊಮ್ಮೆ ಬಿಜೆಪಿ ಭದ್ರಕೋಟೆಯಲ್ಲಿ ಗ್ಯಾರೆಂಟಿಯ ಸಮಾವೇಶ ಮಾಡಲು ಹೊರಟಿದೆ. ಗ್ಯಾರೆಂಟಿಯಲ್ಲೊಂದಾದ ಯುವನಿಧಿಯನ್ನ ಶಿವಮೊಗ್ಗದಲ್ಲಿ ಲೋಕಾರ್ಪಣೆ ಮಾಡಿ ಸೈ ಎನಿಸಿಕೊಂಡಿದ್ದ ಕಾಂಗ್ರೆಸ್ ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ರಾಜಕೀಯ ಶಕ್ತಿಪ್ರದರ್ಶನಕ್ಕೆ ಹೊರಟಿದೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಫೆ.24 ಕ್ಕೆ ಗ್ಯಾರೆಂಟಿ ಸಮಾವೇಶ ನಡೆಸಲಿದ್ದೇವೆ. ಗ್ರಾಮಾಂತರ ಮತ್ತು ನಗರ ವಿಧಾನ ಸಭೆಯನ್ನ ಒಳಗೊಂಡಂತೆ ಸಮಾವೇಶ ನಡೆಸುತ್ತಿರುವುದಾಗಿ ಹೇಳಿದರು. ಫೆ.17 ರಂದು ಮಂಗಳೂರಿನಲ್ಲಿ ದೊಡ್ಡ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಮತ್ತು ತಾವು ಪ್ರಚಾರ ಮಾಡಿದ ವಿಚಾರದ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿದ ಅವರು ಬಿಜೆಪಿಯವರಿಗೆ ಸೋಲುತ್ತಿವಿ ಅಂತಾ ಗೊತ್ತಾದ ಮೇಲೆ ಕೆಟ್ಟ ಬುದ್ದಿ ಬಂದಿದೆ. ನಾವು ಯಾವುದೇ ಪ್ರಚಾರ ಮಾಡಿಲ್ಲ ಎಂದರು.
ಅವರು ಮಾಡುವ ಢೋಂಗಿ ಕೇಸ್ ಗಳಿಗೆ ಹೆದರಲ್ಲ. ಬಿಜೆಪಿಯವರು ಇಂತಹ ಕೆಟ್ಟ ಬುದ್ದಿ ತೋರಿಸುತ್ತಾರೆ. ಕಾರ್ಯಕ್ರಮಗಳನ್ನು ಕೊಟ್ಟು ಜನರನ್ನು ಓಲೈಸಬೇಕು. ರಾಮನನ್ನ ಬೀದಿಗೆ ತಂದವರು ಬಿಜೆಪಿಯವರು. ಸ್ವಾರ್ಥಕ್ಕಾಗಿ ಮತ್ತು ಓಟಿಗಾಗಿ ಬಿಜೆಪಿ ಬೀದಿಗೆ ತಂದ್ರು ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ರೌಡಿಸಂ ಹೆಚ್ಚಳ ವಿಚಾರದ ಕುರಿತು ಮಾತನಾಡಿದ ಮಧು ಬಂಗಾರಪ್ಪ, ರೌಡಿಸಂ ಮಾಡಿದವರು ಯಾರು, ಏನು ರೌಡಿಸಂ ಇದೆ. ರೌಡಿಸಂ ಮಾಡಿ ನಮಗೆ ಅಭ್ಯಾಸ ಇಲ್ಲ. ರಾಗಿ ಗುಡ್ಡದಲ್ಲಿ ರೌಡಿಸಂ ಮಾಡಲು ಹೋಗಿದ್ದವರು ಇವರು ಎಂದು ಬಿಜೆಪಿಯವರನ್ನ ತರಾಟೆಗೆ ತೆಗೆದುಕೊಂಡರು.
ಜನರು ಗ್ಯಾರಂಟಿ ಯೋಜನೆಯ ಸಹಕಾರ ಪಡೆದಿದ್ದಾರೆ. ಅಂದ್ರೆ ಅವರು ನಮಗೆ ಸಹಕಾರ ಕೊಡ್ತಾರೆ. ಅವರ ದುಡ್ಡನ್ನು ಅವರ ಮಡಿಲಿಗೆ ಹಾಕಿದ್ದೇವೆ. 17 ರಂದು ಮಂಗಳೂರಿನಲ್ಲಿ ದೊಡ್ಡ ಸಮಾವೇಶ ಆಯೋಜನೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಮೂಲಕ ನಮ್ಮ ಅಕೌಂಟ್ ಜನರು ಓಪನ್ ಮಾಡಿದ್ರು ಎಂದರು.
ಬಿಜೆಪಿಯವರ ಅಕೌಂಟ್ ಕ್ಲೋಸ್ ಮಾಡಿದ್ರು.ಜನರು ನಮಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ ಎಂದ ಸಚುವರು ಸರಕಾರದಲ್ಲಿ ಹೊಸ ಕಾರು ಖರೀದಿ ವಿಚಾರದ ಬಗ್ಗೆ ಮಾತನಾಢಿ, ಹೊಸ ಕಾರು ತಗೊಂಡು ತಕ್ಷಣ ಸಮಸ್ಯೆ ಆಯ್ತಾ ?ಇವರೆಲ್ಲಾ ಆಟೋ ರಿಕ್ಷಾದಲ್ಲಿ, ಬಸ್ ನಲ್ಲಿ ಓಡಾಡಿದ್ರಾ?ಬರಗಾಲ ಅಂತಾ ನಾವೆಲ್ಲಾ ಊಟ ಮಾಡೋದು ಬಿಟ್ಟಿದ್ದೇವಾ ಎಂದು ಪ್ರಶ್ನಿಸಿದರು.
ಬರಗಾಲ ಅಂತಾ ಸರಕಾರ ಅಕ್ಕಿ ಕೊಡೋದು ಕಡಿಮೆ ಮಾಡಿದೆಯಾ?ಬಿಜೆಪಿಯವರು ಕಿತಾಪತಿಯವರು, ಕಿತಾಪತಿ ಮಾಡುವವರು ಕೆಲವರು ಇದ್ದಾರೆ. ಅವರು ಅಲ್ಲಲ್ಲಿ ಹೀಗೆ ಏನೇನೋ ಮಾತನಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ-https://suddilive.in/archives/8978