ಫೇಸ್ ಬುಕ್ ನಲ್ಲಿ ಶಾಸಕನ ವಿರುದ್ಧ ಪೋಸ್ಟ್-ಬಿಜೆಪಿ ಕಾರ್ಯಕರ್ತನ ಕಾರು ಜಖಂ
ಸುದ್ದಿಲೈವ್/ಶಿವಮೊಗ್ಗ
ಫೇಸ್ ಬುಕ್ ನಲ್ಲಿ ಭದ್ರಾವತಿ ಶಾಸಕರ ವಿರುದ್ದ ಬರೆದುಕೊಂಡಿದ್ದ ಬಿಜೆಪಿ ಕಾರ್ಯಕರ್ತನ ಕಾರಿನ ಗ್ಲಾಜುಗಳನ್ನ ಪುಡಿ ಪುಡಿ ಮಾಡಲಾಗಿದೆ. ಇದರಿಂದ ಮತ್ತೊಂದು ಬಲಪ್ರಯೋಗದ ರಾಜಕಾರಣಕ್ಕೆ ಭದ್ರಾವತಿ ಸಾಕ್ಷಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ವಿರುದ್ದ ಬರೆದುಕೊಂಡಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಅವರ ಮನೆಯ ಮುಂದೆ ನಿಂತಿದ್ದ ಸ್ವಿಫ್ಟ್ ಕಾರಿನ ಗ್ಲಾಜುಗಳನ್ನ ಒಂದೇ ಬೈಕಿನಲ್ಲಿ ಬಂದ ಮೂವರು ಕಿಡಿಗೇಡಿಗಳು ಒಡೆದುಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬೈಕ್ ನಲ್ಲಿ ಬಂದವರು ಶಾಸಕರ ಹಿಂಬಾಲಕರು ಎಂದು ಸಹ ದೂರಲಾಗಿದೆ.
ಫೇಸ್ ಬುಕ್ ನಲ್ಲಿ ಶಾಸಕರ ವಿರುದ್ದ ಮಂಗಳೂರಿನ ದೀಪಕ್ ನವರು ಪ್ರಸ್ತಾಪಿಸಿರುವ ಓಸಿ, ಮಟ್ಕಾ ಕುರಿತ ವಿಡಿಯೋವನ್ನ ಹಾಕಿಕೊಂಡ ಗೋಕುಲ್ ಚುನಾವಣೆಯ ವೇಳೆ ಕೆಲಸ ಕೊಡಿಸುವುದಾಗಿ ಮತ್ತು ಎಂಪಿಎಂ ಕಾರ್ಖಾನೆ ಆರಂಭಿಸುವುದಾಗಿ ಹೇಳಿಕೊಂಡಿದ್ದ ಶಾಸಕರು, ಕಾರ್ಖಾನೆ ಆರಂಭಿಸದಿದ್ದರೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಕನಕ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ ಮತ್ತು ಭದ್ರಾವತಿ ಶಾಸಕರಿಗೆ ಎಂಪಿಎಂ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಒಸಿ ಮತ್ತು ಮಟ್ಕಾ ನಿಲ್ಲಿಸಿ ಕಾರ್ಖಾನೆ ಆರಂಭಿಸಿ ಎಂದು ಗೋಕುಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.
ಇದು ಕಾರಿನ ಗ್ಲಾಜು ಒಡೆಯಲು ಕಾರಣ ಎಂದು ಸಂತ್ರಸ್ತ ಗೋಕುಲ್ ಸುದ್ದಿಲೈವ್ ಗೆ ತಿಳಿಸಿದ್ದಾರೆ. ಕಿಡಿಗೇಡಿಗಳು ಕಾರು ಜಖಂಗೊಳಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೋಕುಲ್ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ನಾಗಿದ್ದಾನೆ.
ಈ ಬಾರಿ ಗೆದ್ದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಎಂಪಿಎಂ ಕಾರ್ಖಾನೆ ಓಪನ್ ಮಾಡಿಸ್ತೀನಿ. ಕಾರ್ಖಾನೆ ಓಪನ್ ಮಾಡಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದ ಶಾಸಕ ಸಂಗಮೇಶ್ವರ್ ಭದ್ರಾವತಿಯಲ್ಲಿ ಇಸ್ಪೀಟು, ಓಸಿ ಮತ್ತು ಕ್ರಿಕೆಟ್ ಬೆಡ್ಡಿಂಗ್ ಮೂಲಕ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಶಾಸಕರು ಎಂಬುದಾಗಿ ಫೇಸ್ ಬುಕ್ ನಲ್ಲಿ ಗೋಕುಲ್ ಬರೆದುಕೊಂಡಿದ್ದರು.
ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಕ್ಕೆ ಗೋಕುಲ್ ಕಾರು ಜಖಂ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/4630