ಕಾಂತೇಶ್ ಗೆ ಟಿಕೇಟ್ ನೀಡುವಂತೆ ಅಭಿಮಾನಿಗಳಿಂದ ಒತ್ತಾಯ
ಸುದ್ದಿಲೈವ್/ಶಿವಮೊಗ್ಗ
ಹಾವೇರಿ-ಗದಗ ಲೋಕಸಭೆ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಕೆ.ಈ.ಕಾಂತೇಶ್ ಗೆ ಟಿಕೇಟ್ ನೀಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಮತ್ತು ಶಿವಮೊಗ್ಗದ ಕಾಂತೇಶ್ ಅಭಿಮಾನಿಗಳು ಶಿವಮೊಗ್ಗದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದಾರೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂತೇಶ್ ಅವರಿಗೆ ಟಿಕೇಟ್ ಕೈತಪ್ಪುವಭೀತಿ ಹಿನ್ನಲೆಯಲ್ಲಿ ಅಭಿಮಾನಿಗಳು ಇಂದು ಭೇಟಿ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪನವರು ದೆಹಲಿಯಲ್ಲಿರುವುದರಿಂದ ಪುತ್ರ ಹಾಗೂ ಸಂಸದ ರಾಘವೇಂದ್ರರಿಗೆ ಮನವಿ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲಿಯೇ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಎರಡನೇ ಪಟ್ಟಿಯಲ್ಲಿ ರಾಜ್ಯದ 15 ಲೋಕ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ಈ ಸಾಧ್ಯತೆಯ ಹಿನ್ನಲೆಯಲ್ಲಿ ಮಾಜಿ ಡಿಸಿಎಂ ಪುತ್ರ ಕಾಂತೇಶ್ ಅಭಿಮಾನಿಗಳು ಒತ್ತಡ ಹಾಕುವ ತಂತ್ರಗಾರಿಕೆಗೆ ಒಳಗಾಗಿದ್ದಾರೆ.
ಇಡೀ 28 ಸ್ಥಾನಗಳಲ್ಲಿ ಒಂದು ಸ್ಥಾನ ಬಿಜೆಪಿ ಕುರುಬರಿಗೆ ಬಿಟ್ಟುಕೊಡಬೇಕು. ಅದರಲ್ಲಿ ಕಾಂತೇಶ್ ಗೆ ಹಾವೇರಿ ಗದಗ ಲೋಕಸಭಾ ಕ್ಷೇತ್ರ ಬಿಟ್ಟುಕೊಡಬೇಕೆಂಬುದು ಕಾಂತೇಶ್ ಅಭಿಮಾನಿಗಳ ಬೇಡಿಕೆಯಾಗಿದೆ. ಈ ಬಗ್ಗೆ ಮಾತನಾಡಿದ ಹಾವೇರಿ ಜಿಲ್ಲೆ ಬಿಜೆಪಿಯ ಒಬಿಸಿ ಅಧ್ಯಕ್ಷರಾದ ನೀಲಪ್ಪ ಚಾವಡಿ ಪಕ್ಷಕ್ಕಾಗಿ ಈಶ್ವರಪ್ಪನವರು ದುಡಿದಿದ್ದಾರೆ. ಕ್ಷೇತ್ರ ಬಿಟ್ಟುಕೊಡುವ ವಿಚಾರ ಬಂದಾಗ ಒಂದು ಮಾತನಾಡದೆ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ.
ಹಿರಿಯರು ಮತ್ತು ಪಕ್ಷದ ವರಿಷ್ಠರು ಹೇಳಿದಂತೆ ಆದೇಶ ಪಾಲಿಸಿಕೊಂಡು ಬಂದಿದ್ದಾರೆ. ಈಗ ಲೋಕಸಭೆಗೆ ಕ್ಷೇತ್ರಕ್ಕೆ ಹಾವೇರಿ ಗದಗದಲ್ಲಿ ಮಗನನ್ನ ಕಣಕ್ಕಿಳಿಸಲು ಇಷ್ಟಪಟ್ಟಿದ್ದಾರೆ. ಮಾಧ್ಯಮಗಳಲ್ಲಿ ನೋಡಿದಾಗ ಅವರಿಗೆ ಟಿಕೇಟ್ ವಂಚಿತರಾಗುವಂತೆ ಭಾಸವಾಗುವಂತೆ ಮೂಡಿಬರುತ್ತಿದೆ. ಈ ಆತಂಕದ ಹಿನ್ನೆಲೆಯಲ್ಲಿ ಬಿಎಸ್ ವೈ ಪುತ್ರನಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಸಂಸದ ರಾಘವೇಂದ್ರ ನಾನು ಒಬ್ಬ ಸಂಸದ ಅಷ್ಟೆ, ಅವರಿಗೆ ಟಿಕೇಟ್ ಕೊಡಿಸಲು ನನಗೆ ಪಕ್ಷದ ಜವಬ್ದಾರಿ ಏನೂ ಇಲ್ಲ. ಮಾಜಿ ಸಿಎಂ ಅವರ ಮನೆ ಎಂದಾಗ ರಾಜ್ಯದ ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಅವರ ಮನವಿಯನ್ನ ಯಾರಿಗೆ ತಲುಪಿಸಬೇಕುಅವರಿಗೆ ತಲುಪಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ-https://suddilive.in/archives/10344