ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಬಳಕೆ ಮುಂದೂಡಿಕೆ-ಜ.27 ಕ್ಕೆ ಮತ್ತೊಂದು ಮೇಲು ಸೇತುವೆ ತಾತ್ಕಾಲಿಕ ಆರಂಭ?
ಸುದ್ದಿಲೈವ್/ಶಿವಮೊಗ್ಗ
ಸಾರ್ವಜನಿಕ ಬಳಕೆಗೆ ನಗರದ ವಿದ್ಯಾನಗರದ ರೈಲ್ವೆ ಓವರ್ ಬ್ರಿಡ್ಜ್ ಜ.26 ರಿಂದ ಆರಂಭವಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಜ.26 ಕ್ಕೆ ಆರಂಭವಾಗಬೇಕಿದ್ದ ಮೇಲು ಸೇತುವೆ ಮುಂದೂಡಲಾಗಿದೆ. ಆದರೆ ಜ.27 ರ ನಂತರ ಸವಳಂಗ ರಸ್ತೆಯ ರೈಲ್ವೆ ಓವರ್ಬ್ರಿಡ್ಜ್ ತಾತ್ಕಾಲಿಕವಾಗಿ ಆರಂಭವಾಗಲಿದೆ ಎಂಬ ಸಣ್ಣ ಆಸೆ ಮತ್ತೊಂದೆಡೆ ಚಿಗುರು ಒಡೆದಿದೆ.
ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆಯ ದಿನದಂದು ಸಾರ್ವಜನಿಕರ ಬಳಕೆಗೆ ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಬಿಡಲಾಗುತ್ತಿದೆ ಎಂದು ಸುದ್ದಿ ಆಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ವಾಹನ ಸಂಚಾರ ತಡವಾಗಲಿದೆ. ಫೆ.05 ರ ನಂತರ ಸಂಚಾರಕ್ಕೆ ಅನುವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾದು ನೋಡಬೇಕಿದೆ.
ಆದರೆ ಸವಳಂಗ ರಸ್ತೆಯ ರೈಲ್ವೆ ಮೇಲು ಸೇತುವೆ ಕಾಮಗಾರಿ ಪೂರ್ಣವಾಗುತ್ತಾ ಬಂದಿದೆ. ಡಾಂಬರೀಕರಣವಾಗುತ್ತಿದೆ. ಜ.27 ರ ನಂತರ ಸಾರ್ವಜನಿಕರ ಬಳಕೆಗೆ ತಾತ್ಕಾಲಿಕವಾಗಿ ಬಿಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ತಾತ್ಕಾಲಿಕವಾಗಿ ಎಂದರೆ ಸಣ್ಣಪುಟ್ಟ ಕಾಮಗಾರಿಯ ಜೊತೆಗೆ ರಸ್ತೆ ಸಂಚಾರಕ್ಕೆ ಬಿಡಲಾಗುತ್ತದೆ ಎಂಬ ವಿಷಯ ತಿಳಿದು ಬಂದಿದೆ. ಅಂಡರ್ ಪಾಸ್ ಕಾಮಗಾರಿ ಇನ್ನೂ ನಡೆಯಬೇಕಿದೆ. ರೈಲ್ವೆ ಮೆಲ್ಸೇತುವೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿದ ನಂತರ ಅಂಡರ್ ಪಾಸ್ ಕಾಮಗಾರಿ ಚುರುಕು ಪಡೆಯಲಿದೆ.
ಸಂಸದ ರಾಘವೇಂದ್ರ ಭೇಟಿ
ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ರೈಲ್ವೆ ಮೇಲ್ಸೇತುವೆಯ ಕೊನೆಯ ಹಂತದ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಭೇಟಿಯಾದ ಸ್ಥಳೀಯರ ಮನವಿಗೆ ಸ್ಪಂದಿಸಿ, ಸೇತುವೆಯ ಕೆಳಭಾಗದಲ್ಲಿ ದ್ವಿಚಕ್ರ ಹಾಗೂ ಇನ್ನಿತರ ವಾಹನಗಳು ಸರಾಗವಾಗಿ ಓಡಾಡಲು ಸಾಧ್ಯವಾಗುವಂತೆ ಯೋಜನೆಯಲ್ಲಿ ಬದಲಾವಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮನವಿಯ ಆಧಾರದ ಮೇರೆಗೆ ತಕ್ಷಣವೇ ರೈಲ್ವೆ ಅಧಿಕಾರಿಗಳಿಗೆ ಸಂಸದರು ನಿರ್ದೇಶನ ನೀಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಆರತಿ ಪ್ರಕಾಶ್, ರೈಲ್ವೆ ಅಧಿಕಾರಿಗಳಾದ ರಾಜಕುಮಾರ್, ಪ್ರಮುಖರಾದ ದಿನೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಮನವಿ ಏನು?
ರೈಲ್ವೆ ಅಂಡರ್ ಪಾಸ್ ನಲ್ಲಿ ಸಾಗುವಾಗ ಪಾದಚಾರಿಗಳಿಗೆ ಅನುಕೂಲವಾಗುವಂತೆ ಮೆಟ್ಟಿಲುಗಳ ರಚನೆಗೆ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಕೃಷಿ ನಗರ ಮತ್ತು ಕೀರ್ತಿನಗರಕಡೆ ಅಂಡರ್ ಪಾಸ್ ನಿಂದ ಸಂಚರಿಸಲು ಮನವಿ ಮಾಡಿಕೊಳ್ಳಲಾಗಿದೆ. ಎರಡೂ ಮನವಿಯೂ ಪರಿಶೀಲನೆ ಹಂತದಲ್ಲಿದೆ.
ಇದನ್ನೂ ಓದಿ-https://suddilive.in/archives/7613