“ಹುಚ್ಚರ ಬಗ್ಗೆ ಹೇಳ್ತಾ ಹೋದರೆ ದೇಶದ ಆಸ್ಪತ್ರೆ ಸಾಕಾಗೊಲ್ಲ”
ಸುದ್ದಿಲೈವ್/ಶಿವಮೊಗ್ಗ
ಪ್ರಧಾನಿ ಮೋದಿಯವರ ಸ್ವಚ್ಛ ತೀರ್ಥ ಅಭಿಯಾನದ ಕರೆಯ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಅಭಿಯಾನದಲ್ಲಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮೊನ್ನೆ ಭಾನುವಾರ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಪಾಲ್ಗೊಂಡಿದ್ದರು. ಇಂದು ಮಾಜಿ ಸಚಿವ ಈಶ್ವರಪ್ಪ ಭಾಗಿಯಾಗಿದ್ದಾರೆ.
ನಗರದ ಎನ್ ಟಿ ರಸ್ತೆಯಲ್ಲಿರುವ ಭಾರತಿ ಕಾಲೋನಿಯ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಈಶ್ವರಪ್ಪ ದೇವಸ್ಥಾನದಲ್ಲಿ ಬಿಡಿಸಿರುವ ರಾಮಾಯಣದ ಪೈಂಟಿಂಗ್ ವೀಕ್ಷಿಸಿದರು.ನಂತರ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.
ನಂತರ ಮಾಧ್ಯಮಗಳಿಗೆ ಮಾತಡಿದ ಅವರು ಬಿಜೆಪಿಯಲ್ಲಿ ಹುಚ್ಚರಿದ್ದಾರೆ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಹುಚ್ಚರ ಬಗ್ಗೆ ಹೇಳುತ್ತಾ ಹೋದರೆ ದೇಶದಲ್ಲಿ ಆಸ್ಪತ್ರೆ ಸಾಕಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮನಸ್ಸಿನಲ್ಲಿ ರಾಮ ಇದ್ದಾನೆ. ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ಬಲ್ಲೆ. ಹಾಗಾಗಿ ರಾಮನ ಮೂರ್ತಿಯ ಪ್ರತಿಷ್ಟಾಪನೆ ಆದ ನಂತರವಾದರೂ ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ರಾಮ ಎಲ್ಲರಿಗೂ ಸೇರಿದ್ದಾನೆ. ಅದರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಮೂವರು ಡಿಸಿಎಂ ವಿಷಯ ಪ್ರಸ್ತಾಪವಾಗುತ್ತಿದೆ. ಅವರು ಬಹಿರಂಗ ಚರ್ಚೆ ಮಾಡುವುದನ್ನ ಬಿಟ್ಟು ಹೈ ಕಮಾಂಡ್ ನಿರ್ಧಾರಕ್ಕೆ ಬಿಟ್ಟು ಬಿಡಲಿ.ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ರನ್ನು ಹಣಿಯಲು ಈ ರೀತಿಯ ಬಹಿರಂಗ ಚರ್ಚೆ ಸೂಕ್ತವಲ್ಲ ಎಂದಿದ್ದಾರೆ.
ನಮ್ಮ ಸರ್ಕಾರದ ಆಡಳಿತದಲ್ಲೂ ಮೂವರು ಡಿಸಿಎಂ ಗಳಿದ್ದರು. ಆದರೆ ಎಲ್ಲೂ ಈ ರೀತಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾಂಗ್ರೆಸ್ ಕೆಲ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತ ಪಡಿಸುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಈ ರೀತಿ ಬಹಿರಂಗ ಚರ್ಚೆ ಮತದಾರರಿಗೆ ಬೇಸರ ಮೂಡಿಸುತ್ತದೆ ಎಂದರು.
ಇವರಿಗೆ ಕಿತ್ತಾಡಲು ಮತ ನೀಡಲಾಗಿದೆ ಎಂಬ ಭಾವನೆ ಮೂಡುವಂತೆ ಡಿಸಿಎಂ ಚರ್ಚೆ ನಡೆಯುತ್ತಿದೆ. ಕುರುಬ ಸಮಾಜದಲ್ಲಿ ನಾನು ಅರ್ಜಿ ಹಾಕಿ ಹುಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ. ಅದು ದೇವರ ನಿರ್ಧಾರ. ತಂದೆ-ತಾಯಿಯ ಜನ್ಮ ಪಡೆದ ನಂತರ ಸಂಸ್ಕಾರ ಮುಖ್ಯ. ಕನಕದಾಸ, ವಾಲ್ಮೀಕಿ ಮೊದಲಾದವರು ನಾಡಿಗೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.
ಮೈಸೂರಿನ ಶಿಲ್ಪಿ ಯೋಗರಾಜ್ ಅವರ ಬಾಲರಾಮ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವರು, ಇದು ರಾಜ್ಯದ ಪಾಲಿಗೆ ಸಂತಸದ ವಿಷಯ, ಅಷ್ಟೇ ಅಲ್ಲ ಹೆಮ್ಮೆಯೂ ಹೌದು. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದ ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರುವ ಮೂರ್ತಿ ಆಯ್ಕೆಯಾಗಿರುವುದು ಅದೃಷ್ಠವೇ ಸರಿ ಎಂದರು.
ಇದನ್ನೂ ಓದಿ-https://suddilive.in/archives/6948