ಬೇಡಿಕೆಯೊಂದಿಗೆ ಬೆಂಗಳೂರಿನಲ್ಲಿ ರಾಜ್ಯ ನೌಕರರ ಮಹಾ ಸಮ್ಮೇಳನ-ಷಡಾಕ್ಷರಿ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಮಟ್ಟದ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
27 ನೇ ತಾರೀಖು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಎರಡು ಲಕ್ಷ ನೌಕರರು ಸೇರುವ ನಿರೀಕ್ಷೆ ಇದೆ.ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಮ್ಮ ಮೂರು ಬೇಡಿಕೆಯನ್ನು ಮುಂದಿಡುತ್ತೇವೆ ಎಂದು ಹೇಳಿರುವ ರಾಜ್ಯಾಧ್ಯಕ್ಷರು, ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು. 7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.
ಬೇಡಿಕೆ ಈಡೇರಿಕೆಗಾಗಿ ಸಮ್ಮೇಳನ ಮಾಡುತ್ತಿರುವುದಾಗಿ ತಿಳಿಸಿದ ಷಡಾಕ್ಷರಿ, ಸಮ್ಮೇಳನದಲ್ಲಿ ನಮ್ಮ ಬೇಡಿಕೆ ಬಗ್ಗೆ ಸಿಎಂ ಭರವಸೆ ನೀಡುತ್ತಾರೆ ಎನ್ನುವ ಭರವಸೆ ಇದೆ. ಸಮ್ಮೇಳನದಲ್ಲಿ ಸಂಘಟನೆ ಶಕ್ತಿ ತೋರಿಸಲಾಗುತ್ತದೆ. ಸಮ್ಮೇಳನಕ್ಕೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹಳೇ ಪಿಂಚಣಿ ಜಾರಿಗೆ ತರುತ್ತೇವೆ ಅಂದಿದ್ದಾರೆ.ಸರ್ಕಾರ ಸಮಯ ಕೇಳಿದೆ ಹಾಗಾಗಿ ಸರ್ಕಾರದ ಆದೇಶಕ್ಕೆ ಕಾಯುವುದಾಗಿ ಹೇಳಿದರು.