ಶಾಲೆಯನ್ನ ದತ್ತು ಪಡೆದು ಜಾಗವನ್ನೇ ಕಬಳಿಸುವ ಹುನ್ನಾರದ ಆರೋಪ-ಮೂವರು ಗ್ರಾಮ್ಥರಿಂದ ದೂರು
ಸುದ್ದಿಲೈವ್/ಶಿವಮೊಗ್ಗ
ಸರ್ಕಾರಿ ಶಾಲೆಯನ್ನು ದತ್ತು ಪಡೆಯುವುದಾಗಿ ದಾಖಲೆ ರೂಪಿಸಿಕೊಂಡು ಸರ್ಕಾರಿ ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಂಡಿರವ ಆರೋಪ ಕೇಳಿ ಬಂದಿದೆ. ಇದರ ವಿರುದ್ಧ ಹುಣಸೇಕಟ್ಟೆ ಗ್ರಾಮಸ್ಥರು ಜಿಲ್ಲಾಧಿಕಾರಿ, ಸಿಇಒ ಹಾಗೂ ಭದ್ರಾವತಿ ಬಿಇಒಗೆ ದಾಖಲೆಗಳೊಂದಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಶಾಲೆಯ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಕ್ರಮವಾಗಿ ಕಳಪೆ ಕಾಮಗಾರಿ ಮಾಡಿ ಅರ್ಧಕ್ಕೆ ಕೈ ಬಿಟ್ಟಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರಿ ಶಾಲೆಯನ್ನು ದತ್ತು ಸ್ವೀಕಾರದಿಂದ ಮುಕ್ತಗೊಳಿಸಿ, ಅಕ್ರಮ ದಾಖಲೆಗಳೊಂದಿಗೆ ಶಾಲಾ ಜಾಗವನ್ನು ಉಳಿಸಬೇಕೆಂದು ಭದ್ರಾವತಿ ತಾಲೂಕ್ ಹುಣಸೇಕಟ್ಟೆ ಗ್ರಾಮದ ನಿವಾಸಿ, ವಿದ್ಯಾರ್ಥಿನಿಯ ತಂದೆ ಶೇಷಣ್ಣ, ಕೇಶವ, ಬಾಬು ಹಾಗೂ ಇತರರು ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಿಡಿಪಿಐ ಹಾಗೂ ಭದ್ರಾವತಿ ಬಿಇಓ ಗೆ ಪ್ರತ್ಯೇಕ ದಾಖಲೆಯ ದೂರು ಸಲ್ಲಿಸಿದ್ದಾರೆ.
ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲದೆ ಪರದಾಟ ಪಡುತ್ತಿರುವಾಗ ಇದನ್ನು ನಿರ್ಮಿಸಲು ಜಿಲ್ಲಾ ಪಂಚಾಯತ್ ನ ನರೇಗಾ ಯೋಜನೆಯನ್ನು ಬಳಸಿಕೊಳ್ಳಲಾಗಿದೆ. ನರೇಗಾ ಯೋಜನೆ ಬಳಸಿಕೊಂಡರೂ ಕೆಲಸವನ್ನು ಸಂಪೂರ್ಣಗೊಳಿಸಲಾಗಿಲ್ಲ. ಹಾಗೂ ದತ್ತು ಸ್ವೀಕಾರ ಹೆಸರಿನಲ್ಲಿ ಶಾಲೆಗೆ ಬಂದು ಶಾಲೆಯ ಜಾಗವನ್ನೇ ಕಬಳಿಸಲಾಗಿದೆ ಎಂದು ದೂರಲಾಗಿದೆ.
ದತ್ತು ಪಡೆದ ವಿರೂಪಾಕ್ಷಪ್ಪ ಹಾಗೂ ಇತರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಸೂಕ್ತ ದಾಖಲೆಗಳ ಸಹಿತ ದೂರು ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕಡುಬಡವರ ಹಾಗೂ ಕೃಷಿ ಕಾರ್ಮಿಕರ ಮಕ್ಕಳು ಶೌಚಾಲಯವಿಲ್ಲದೆ ಹಾಗೂ ಶಾಲೆಯಲ್ಲಿ ವ್ಯವಸ್ಥಿತ ಮೂಲಭೂತ ಸೌಕರ್ಯಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಹಿಂದೆ ಈ ಶಾಲೆಯ ಪಕ್ಕದಲ್ಲಿ ಉಚಿತವಾಗಿ 40×80 ಅಳತೆಯ ನಿವೇಶನವನ್ನು ಕಂಬದಾಳು ಹೊಸೂರಿನ ಗ್ರಾಮ ಪಂಚಾಯಿತಿ ಮೂಲಕ ಇಂದಿರಾ ಆವಾಜ್ ಯೋಜನೆಯಲ್ಲಿ ಪಡೆದಿದ್ದು, ಅದನ್ನು ಮಾರಿದ್ದರೆ. ಈಗ ಜಾಗವನ್ನು ಕಬಳಿಸುವ ಉದ್ದೇಶದಿಂದ 30-10- 2018 ರಂದು ಶಾಲಾ ದತ್ತು ಯೋಜನೆ ನಿರ್ವಹಣಾ ಸಮಿತಿ ಹೆಸರಿನಲ್ಲಿ ಶಾಲೆಗೆ ಬಂದು ಈ ಸಮಿತಿಗೆ ಕಾರ್ಯದರ್ಶಿಯಾಗಿ, ಅವರ ಪತ್ನಿಯನ್ನು ಅಧ್ಯಕ್ಷರನ್ನಾಗಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ
ಹಿಂದೆ ಇದೇ ಶಾಲೆಯಲ್ಲಿದ್ದ ಈಗ ನಿವೃತ್ತರಾಗಿರುವ ಮುಖ್ಯ ಶಿಕ್ಷಕ ಶಿವಾನಾಯಕ ಅವರಿಗೆ 2014ರ ಆಗಸ್ಟ್ 20ರಂದು ಅರ್ಜಿ ಬರೆದುಕೊಂಡು ಶಾಲಾ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ, ಎನ್ಸಿಸಿ, ಸ್ಕೌಟ್, ಸೇವಾದಳ, ಕ್ರೀಡಾ ಆದ್ಯತೆ, ವ್ಯಕ್ತಿತ್ವ ವಿಕಸನ, ಎಸ್ಸಿ ಎಸ್ಟಿ ಮಕ್ಕಳ ಅಭಿವೃದ್ಧಿ, ಅವಶ್ಯ ಕೊಠಡಿಗಳ ನಿರ್ಮಾಣಕ್ಕೆ ದಾನಿಗಳ ಸಹಾಯ ಪಡೆದು ಕಾರ್ಯಕ್ರಮ ಮಾಡುವುದಾಗಿ ಹೇಳಿ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಯ ಕೆಲಸ ಆಗದಿದ್ದರೂ ಇದಕ್ಕೆ ಅನುಮತಿ ನೀಡಿ ಹಣ ಕಬಳಿಸಲು ಪ್ರೇರಣೆ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ-https://suddilive.in/archives/11453