ಜಲ್ ಜೀವನ್ ಮಿಷಿನ್ ಕಾಮಗಾರಿಯ 11ನೇ ದಿನದ ‘ತಿಥಿ ಆಚರಿಸಿದ’ ಗ್ರಾಮಸ್ಥರು
ಸುದ್ದಿಲೈವ್/ತೀರ್ಥಹಳ್ಳಿ
ಇಲ್ಲಿನ ಕೋಡ್ಲು ಗ್ರಾಮದಲ್ಲಿ 11 ದಿನಗಳ ಹಿಂದೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರಂಭಗೊಂಡ ಜಲ್ ಜೀವನ್ ಮಿಷನ್ನ ನೀರು ಶುದ್ಧೀಕರಣ ಘಟಕ (WTP)ದ ಕಾಮಗಾರಿ ವಿರೋಧಿಸಿ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ & ರಾಜ್ಯ ರೈತ ಸಂಘ- ತೀರ್ಥಹಳ್ಳಿ ಘಟಕ ತಿಥಿ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದೆ.
“ಜನರ ಸಲಹೆಗಳಿಗೆ ಬೆಲೆ ನೀಡದೆ, ಜನಾಭಿಪ್ರಾಯವನ್ನು ಪೊಲೀಸರ ಮೂಲಕ ಹತ್ತಿಕ್ಕಿದ ಸರಕಾರ ನೀರಿನ ಶುದ್ಧೀಕರಣ ಘಟಕದ ಕಾಮಗಾರಿಗೆ ಚಾಲನೆ ನೀಡಿ 11 ದಿನಗಳ ತುಂಬಿದೆ. ಹೀಗಾಗಿ, ಶಿವರಾತ್ರಿಯ ಮುನ್ನಾದಿನಾಗಿರುವ ಇವತ್ತು ಜನರ ಆಶಯಗಳ ಸಾವಿನ ಸಾಂಕೇತಿಕವಾಗಿ ಪ್ರತಿಭಟನಾ ಸ್ಥಳದಲ್ಲಿ ತಿಥಿಯನ್ನು ಆಚರಿಸಲಾಯಿತು,’’
ತೀರ್ಥಹಳ್ಳಿ- ಶೃಂಗೇರಿ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ಕೋಡ್ಲು ಗ್ರಾಮದಲ್ಲಿ ಗ್ರಾಮಸ್ಥರು ತಮಗೆ ತೋಚಿದ ರೀತಿಯಲ್ಲಿ ಸರಕಾರದ ಕಾಮಗಾರಿಗೆ ಅಪರ ಕರ್ಮಗಳನ್ನು ನೆರವೇರಿಸಿದ್ದಾರೆ. ಬಾಳೆ ಎಲೆಯ ಮೇಲೆ ಕಾಮಗಾರಿಯ ಲಂಚದ ಸಂಕೇತವಾಗಿ ಹಣದ ನೋಟುಗಳು, ಜತೆಗೆ, ಮೊಟ್ಟೆ, ಮಾಂಸ, ಮದ್ಯವನ್ನು ಎಡೆಯ ರೂಪದಲ್ಲಿ ಇಡುವ ಮೂಲಕ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
“ಎಡೆ ಇಡುವ ಸಮಯದಲ್ಲಿ ರೈತರು ಬಾಯಿ ಬಡಿದುಕೊಳ್ಳುತ್ತಾ, ಹೊಗಳಿಕೆಯ ವಿಡಂಬನೆಯ ಮೂಲಕ ಭ್ರಷ್ಟ ವ್ಯವಸ್ಥೆಗೆ ಶಾಂತಿಯುತವಾಗಿ ಅರ್ಥೈಸುವ ಕೆಲಸ ಮಾಡಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಸರಕಾರ ಹುಡುಗಾಟಿಕೆ ತೋರಿಸಬಾರದು,’’ ಎಂದು ರೈತ ನಾಯಕರು ಈ ಸಮಯದಲ್ಲಿ ಎಚ್ಚರಿಸಿದ್ದಾರೆ.
“ಸಾಂಕೇತಿಕವಾಗಿ ತಿಥಿ ನೆರವೇರಿಸುವ ಮೂಲಕ ಜನ ವಿರೋಧಿ ಸರಕಾರದ ಸಾವಿನ ಸೂತಕವನ್ನೂ ಪಡೆದುಕೊಂಡಿದೆ. ನಾಳೆಯಿಂದ ಹೋರಾಟ ಹೊಸ ಹಾದಿಯಲ್ಲಿ ಕ್ರಮಿಸಲಿದೆ. ಅಂತಿಮವಾಗಿ ತಾಲೂಕಿನ ಪ್ರತಿಮನೆಗೂ ವೈಜ್ಞಾನಿಕವಾಗಿ ಕುಡಿಯುವ ನೀರು ತಲುಪುವವರೆಗೂ ಹೋರಾಟ ನಿಲ್ಲುವುದಿಲ್ಲ,’’ ಎಂದು ಇದೇ ಸಮಯದಲ್ಲಿ ಸಮಿತಿ ಹಾಗೂ ರೈತ ಸಂಘದ ತಾಲೂಕು ಘಟಕ ತಿಳಿಸಿದೆ.
ಇದನ್ನೂ ಓದಿ-https://suddilive.in/archives/10277