ಕುಮಾರ್ ಬಂಗಾರಪ್ಪನವರ ನಡೆಯ ಮೇಲೆ ನಿಂತಿದೆ ಈ ಬಾರಿಯ ‘ಲೋಕ’ ಚುನಾವಣೆ!?
ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವುದು ಬಾಕಿ ಉಳಿದಿದೆ. ಶಿವಮೊಗ್ಗದ ರಣರಂಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ ನಡುವೆ ಬಿಗ್ ಫೈಟ್ ನಡೆಯುವ ನಿರೀಕ್ಷೆ ಇದೆ. ಈ ಬಿಗ್ ಫಟ್ ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾರು ಆಗಲಿದ್ದಾರೆ ಎಂಬದರ ಮೇಲೆ ನಿರ್ಧಾರವಾಗಲಿದೆ.
ಬಿಜೆಪಿ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿ ಯಾರು ಎಂಬುದನ್ನ ಬಿಂಬಿಸಿಕೊಂಡಿದೆ. ಸಂಸದ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಲ್ಲಿ ಅವರ ಸ್ಪರ್ಧೆಗೆ ಯಾರದ್ದೂ ತಕರಾರು ಇದ್ದಂಗೆ ಕಂಡು ಬರುತ್ತಿಲ್ಲ. ಹೀಗಾಗಿ ಅವರ ಆ ಪಕ್ಷದ ಅಭ್ಯರ್ಥಿ ಎಂದು ಘೋಷಣೆಯಾಗುವುದು ಬಾಕಿ ಮಾತ್ರ ಉಳಿದಿದೆ.
ಆದರೆ ಕುತೂಹಲ ಕೆರಳಿಸುತ್ತಿರುವುದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂಬುದು. ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯರೋ, ಹೊರಗಿನವರೊ, ಓರ್ವನನ್ನ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಆದರೆ ಅವರನ್ನ ಗೆಲ್ಲಿಸಿಕೊಂಡು ಬರಲಿದೆಯಾ ಎಂಬುದೇ ಲೆಕ್ಕಾಚಾರಗಳು ಆರಂಭವಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ವಿಧಾನ ಸಭೆಯಲ್ಲಿ ಏಳು ಕ್ಷೇತ್ರಗಳಲ್ಲಿ ಮೂರು ಸ್ಥಾನ ಪಡೆದು ಲೊಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡುವ ಉತ್ಸುಕತೆಯಲ್ಲಿದೆ. ಆದರೆ ಅಖಾಡ ಯಾರದ್ದು ಎಂಬುದೇ ಕುತೂಹಲಕಾರಿಯಾಗಿದೆ. ಬಿಜೆಪಿಯಲ್ಲಿ ಅಭ್ಯರ್ಥಿಯ ಅಧಿಕೃತ ಘೋಷಣೆ ಬಾಕಿ ಉಳಿದಿದ್ದರೂ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನೇ ಮುಗಿಸಿದೆ. ಆದರೆ ಕಾಂಗ್ರೆಸ್ ನ ಅಭ್ಯರ್ಥಿಯಾರೆಂಬುದು ಚರ್ಚೆ ಮುಂದುವರೆಯುತ್ತಿದೆ.
ಈ ಬಾರಿಯ ಲೋಕಸಭಾ ಚುನಾವಣೆ ಮಾತ್ರ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿರ್ಧಾರದ ಮೇಲೆ ನಿಂತಿದೆ. ಅವರು ಏನು ಮಾಡಲಿದ್ದಾರೆ ಎಂಬ ನಿರ್ಣಯದ ಮೇಲೆ ನಿಂತಿದೆ. ಒಂದು ವೇಳೆ ಕುಮಾರ್ ಅವರನ್ನ ಕಾಂಗ್ರೆಸ್ ಗೆ ಕರೆ ತರುಲ್ಲಿ ಯಶಸ್ವಿಯಾದರೆ ಈ ಬಾರಿಯ ಲೋಕಸಭಾ ಚುನಾವಣೆಯ ರಣರಂಗ ಭೀಕರ ಕಾಳಗಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.
ಈಗಾಗಲೇ ಜಿಲ್ಲಾ ಬಿಜೆಪಿಯಲ್ಲಿ ಈಡಿಗ ಸಮುದಾಯವನ್ನ ಕಡೆಗಣಿಸಲಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ. ನೂತನವಾಗಿ ರಚನೆಗೊಂಡ ಜಿಲ್ಲಾ ಸಮಿತಿಯಲ್ಲಿ ಈಡಿಗ ಸಮುದಾಯದವರನ್ನ ಗುರುತಿಸಿ ಸ್ಥಾನಮಾನ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಡ್ಯಾಮೇಜ್ ಕಂಟ್ರೋಲ್ ಗೆ ಬಿಜೆಪಿ ಮಾ.5 ರಂದು ಸಾಗರದಲ್ಲಿ ಸಮಾವೇಶ ನಡೆಸಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಇದರ ಬೆನ್ನಲ್ಲೇ ಅದೇ ಸಮುದಾಯದ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿದು ಅಭ್ಯರ್ಥಿಯಾದರೆ ಬಿಜೆಪಿಯ ಲೆಕ್ಕಾಚಾರವನ್ನ ಬುಡಮೇಲು ಮಾಡುವ ಸಾಧ್ಯತೆ ಇದೆ ಎಂಬುದೆ ತಜ್ಞರ ಅಭಿಪ್ರಾಯವಾಗಿದೆ. ಆದರೆ ಕುಮಾರ್ ಇಷ್ಟು ಹೊತ್ತಿಗೆ ತಮ್ಮ ನಿಲುವನ್ನ ಸ್ಪಷ್ಟಪಡಿಸಬೇಕಿತ್ತು. ಆ ಗುಣಲಕ್ಷಣಗಳು ಕಾಣ್ತಾ ಇಲ್ಲ. ಬಿಜೆಪಿಯಲ್ಲಿದ್ದರೂ ಯಾವುದೇ ಸಮಾವೇಶದಲ್ಲಿ ಭಾಗಿಯಾಗ್ತಾ ಇಲ್ಲ.
ಮೊನ್ನೆ ಶಿಕಾರಿಪುರದಲ್ಲಿ ನಡೆದ ಬಿಜೆಪಿಯ ತಾಲೂಕು ಹಿಂದುಳಿದ ವರ್ಗಗಳ ಸಮಾವೇಶದ ಆಹ್ವಾನ ಪತ್ರಿಕೆ ಅವರ ಹೆಸರನ್ನ ನಮೋದಿಸಿದ್ದರೂ ಸಮಾವೇಶದಲ್ಲಿ ಗೈರು ಹಾಜರಿದ್ದರು. ಈ ರೀತಿಯಲ್ಲಿ ಅವರು ಬಿಜೆಪಿ ಕಾರ್ಯಕ್ರಮದಿಂದ ದೂರ ಉಳಿದಿರುವುದು ಪಕ್ಷ ತೆರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿದೆ. ಈ ಹಿನ್ನಲೆಯಲ್ಲಿ ಅವರು ಎಲ್ಲಿ ಗುರುತಿಸಿಕೊಳ್ಳುತ್ತಾರೋ ಅಲ್ಲಿ ಈ ಬಾರಿಯ ಚುನಾಣೆಯ ವಿಜಯ ಲಕ್ಷ್ಮಿ ನಿಲ್ಲಲಿದೆ ಎಂಬ ಲೆಕ್ಕಾಚಾರ ಮತ್ತಷ್ಟು ಗಟ್ಟಿಯಾಗುತ್ತಿದೆ.
ಇನ್ನೂ ಕಾಂಗ್ರೆಸ್ ನ ಅಭ್ಯರ್ಥಿಯ ಘೋಷಣೆ ಮಾಡಿಲ್ಲ. ಈಗಾಗಲೇ ಗೀತಾ ಶಿವರಾಜ್ ಕುಮಾರ್ ಜಿಲ್ಲೆಯಲ್ಲಿ ಓಡಾಟ ಆರಂಭಿಸಿದ್ದಾರೆ. ಪಕ್ಷ ಅಭ್ಯರ್ಥಿ ಎಂದು ಘೋಷಿಸಿದರೆ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ನಟ ಶಿವರಾಜ್ ಕುಮರ್ ಸಹ ಪತ್ನಿಯನ್ನ ಎಂಪಿಯಾಗಿ ನೋಡಲು ಬಯಸುತ್ತೀನಿ ಎಂದು ಹೇಳುವ ಮೂಲಕ ಈ ಬಾರಿಯ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇರಬಹುದು ಎಂದು ಬಿಂಬಿಸಲಾಗುತ್ತಿದೆ.
ಹಾಗಾಗಿ ಕಾಂಗ್ರೆಸ್ ಯಾರನ್ನ ಘೋಷಣೆ ಮಾಡಲಿದೆ ಕಾದು ನೋಡಬೇಕಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಭವಿಷ್ಯ ಕುಮಾರ್ ಬಂಗಾರಪ್ಪನವರ ನಡೆ ಎತ್ತಕಡೆ ಎಂಬುದರ ಮೇಲೆ ಅವಲಂಭಿತವಾಗಿದೆ. ಜಾತಿ ಲೆಕ್ಕಾಚಾರದಲ್ಲಿ ನಡೆಯುವ ಚುನಾವಣೆಯಲ್ಲಿ ಕುಮಾರ್ ನಿಲುವು ಕುತೂಹಲ ಮೂಡಿಸಿದೆ.
ಇದನ್ನೂ ಓದಿ-https://suddilive.in/archives/9962