Suddilive || Shivamogga
ದಂಡ ವಿಧಿಸಿದ ಆಯೋಗ-A commission imposed a fine
ಶಿಕಾರಿಪುರ ತಾಲೂಕು ಮಾಲಗೊಂಡನಕೊಪ್ಪ ಮತ್ತು ಬಿಳಿಕಿ ಗ್ರಾಮದ ಕೃಷಿಕರಾದ ರಮೇಶಪ್ಪ, ರಾಮಪ್ಪ ಸೋಮಪ್ಪ ಮತ್ತು ಇತರೆ 12 ಜನ ಕೃಷಿಕರಿಗೆ ಕಳಪೆ ಗುಣಮಟ್ಟದ ಭತ್ತದ ಬೀಜ ಪೂರೈಸಿದ ಪೂರೈಕೆದಾರರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ನೀಡಿದೆ.
ದೂರದಾರರಾದ ರಮೇಶಪ್ಪ ಮತ್ತು ಇತರ 12 ಜನ ರೈತರು ಕಾಸ್ವಿ ಅಗ್ರಿ ಜೆನೆಟಿಕ್ಸ್ ಪ್ರೈ.ಲಿ. ಮೆಹಬೂಬ್ ನಗರ, ತೆಲಂಗಾಣ, ಶ್ರೀ ಗಂಗಾ ಆಗ್ರೋ ಇನ್ಪುಟ್ಸ್, ಎ.ಪಿ.ಎಂ.ಸಿ. ದಾವಣಗೆರೆ ಮತ್ತು ಶ್ರೀ ಓಂ ಟ್ರೇರ್ಸ್, ಆನವಟ್ಟಿ ರಸ್ತೆ, ಶಿರಾಳಕೊಪ್ಪ, ಶಿವಮೊಗ್ಗ ಜಿಲ್ಲೆ ಇವರುಗಳ ವಿರುದ್ದ ಕಳಪೆ ಗುಣಮಟ್ಟದ ಭತ್ತದ ಬೀಜಗಳನ್ನು ಪೂರೈಸಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ್ದರು. ಇವರುಗಳು ಶ್ರೀ ಓಂ ಟ್ರೇರ್ಸ್ರವರಿಂದ ಚಾರ್ಮಿ ತಳಿಯ ಭತ್ತದ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿದ 40-50 ದಿನಗಳಾದರೂ ಸರಿಯಾದ ರೀತಿಯಲ್ಲಿ ಪೈರು ಬೆಳವಣಿಗೆಯಾಗದಿರುವುದರಿಂದ ಪೂರೈಕೆದಾರರನ್ನು ವಿಚಾರಿಸಿ, ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದವರು ಪರಿಶೀಲಿಸಿ ನೀಡಿರುವ ವರದಿಯನ್ನು ಆಧರಿಸಿ, ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದ್ದು, ಇಳುವರಿ ಕಡಿಮೆಯಾಗಿರುವುದಾಗಿ ದೂರು ನೀಡಿರುತ್ತಾರೆ.
ಈ ಸಂಬಂಧ ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಅವರು ತಮ್ಮ ವಕೀಲರ ಮೂಲಕ ಆಯೋಗದ ಮುಂದೆ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರ ಮತ್ತು ಎದುರುದಾರರ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಎರಡೂ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ ಹಾಗೂ ಉನ್ನತ ನ್ಯಾಯಾಲಯಗಳ ಆದೇಶಗಳನ್ವಯ, ಆಯೋಗವು ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದ್ದು, ದೂರುದಾರರು ನಷ್ಟ ಅನುಭವಿಸಿರುತ್ತಾರೆಂದು ತೀರ್ಮಾನಿಸಿ, ಎಲ್ಲಾ 13 ದೂರುದಾರರಿಗೆ ಪರಿಹಾರವಾಗಿ ಒಟ್ಟು ರೂ. 4,43,724/- ಗಳನ್ನು ಶೇ. 8ರ ಬಡ್ಡಿ ಸಹಿತ ದಿ: 01/01/2023 ರಿಂದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗೆ ಪಾವತಿಸಲು, ತಪ್ಪಿದ್ದಲ್ಲಿ ಈ ಮೊತ್ತಕ್ಕೆ ಶೇ. 10ರಂತೆ ಬಡ್ಡಿಯನ್ನು ಪೂರ ಹಣ ಪಾವತಿಸುವವರೆಗೆ ಹಾಗೂ ರೂ. 10,000/- ಗಳನ್ನು ಮಾನಸಿಕ ಹಾನಿಗೆ ಮತ್ತು ರೂ. 5,000/-ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ಪ್ರತಿ ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ. 09 ರಂದು ಆದೇಶಿಸಿದೆ.
A commission imposed a fine
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಆರ್ಟಿಕಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದುವರಿಸಿ
ಪ್ರತ್ಯುತ್ತರಅಳಿಸಿ