Girl in a jacket

ಬಿ ಮತ್ತು ಸಿ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ


ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿಗಳ ಕಾಯ್ದೆಯನ್ವಯ ಶಿವಮೊಗ್ಗ ಜಿಲ್ಲೆಯ ಬಿ ಮತ್ತು ಸಿ ಪ್ರವರ್ಗ ಮುಜರಾಯಿ ದೇವಾಲಯಗಳ ಅರ್ಹ ಸದಸ್ಯರುಗಳನ್ನು ನಿಗದಿಪಡಿಸಿದ ಅರ್ಹತೆಗಳನುಸಾರವಾಗಿ ವ್ಯವಸ್ಥಾಪನಾ ಸಮಿತಿಯನ್ನು ಮುಂದಿನ 3 ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಮತ್ತು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ನಿಗಧಿತ ನಮೂನೆ -1(ಬಿ) (22ನೇ ನಿಯಮ) ನ್ನು ಆಯಾ ತಾಲೂಕು ಕಚೇರಿಗಳಿಂದ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ, ನ.19ರೊಳಗಾಗಿ ಸಂಬಂಧಿಸಿದ ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸ ಬಯಸುವ ಆಸಕ್ತರಿಗೆ ಅರ್ಹತೆಗಳು  

ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.  ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯತ್ವ ಮಾತ್ರ ಪಡೆಯಬಹುದಾಗಿದೆ. ದೇವರಲ್ಲಿ ನಂಬಿಕೆಯುಳ್ಳವರಾಗಿದ್ದು, ಒಳ್ಳೆಯ ವರ್ತನೆ ಹಾಗೂ ಹೆಸರು ಹೊಂದಿದ್ದ ಹಾಗೂ ದೇವಾಲಯ/ಸಂಸ್ಥೆಯು ಇರುವ ಪ್ರದೇಶದಲ್ಲಿ ಗೌರವಕ್ಕೆ ಪಾತ್ರರಾಗಿರಬೇಕು.

ಅನರ್ಹತೆಗಳು: 

ಒಂದು ಸಕ್ಷಮ ನ್ಯಾಯಾಲಯದಿಂದ ಅವಿಮುಕ್ತ ದಿವಾಳಿಯೆಂದು ಘೋಷಿತನಾಗಿರಬಾರದು.  ಅಸ್ವಸ್ಥಚಿತ್ತನಾಗಿದ್ದು ಮತ್ತು ಹಾಗೆಂದು ಸಕ್ಷಮ ನ್ಯಾಯಾಲಯದಿಂದ ಘೋಷಿಸಲಾಗಿದ್ದರೆ ಅಥವಾ ಕಿವುಡು ಅಥವಾ ಮೂಕ ಅಥವಾ ಕುಷ್ಟ ಅಥವಾ ಇತರೆ ಯಾವುದೇ ಭಯಂಕರ ಅಥವಾ ಸಾಂಕ್ರಾಮಿಕ ಕಾಯಿಲೆಯಿಂದ ಪೀಡಿತನಾಗಿರಬಾರದು.  

ದೇವಾಲಯದ ಯಾವುದೇ ಸ್ವತ್ತಿನ ಅಥವಾ ಮಾಡಿಕೊಳ್ಳಲಾದ ಕರಾರಿನ ಸಂಬಂಧದಲ್ಲಿ ಈಗಿರುವ ಗುತ್ತಿಗೆ ಸಂಸ್ಥೆಗಾಗಿ ಮಾಡಲಾದ ಕಾಮಗಾರಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಹಿತಾಸಕ್ತಿ ಹೊಂದಿದ್ದರೆ ಅಥವಾ ಸಂಸ್ಥೆಗಾಗಿ ತಾನು ಕೊಡಬೇಕಾದ ಯಾವುದೇ ಪ್ರಕಾರದ ಬಾಕಿಯನ್ನು ಕೊಡದೆ ಉಳಿಸಿಕೊಂಡಿದ್ದರೆ, ಸಂಸ್ಥೆಯ ಪರವಾಗಿ ಅಥವಾ ವಿರುದ್ಧವಾಗಿ ಕಾನೂನು ವೃತ್ತಿಗಾರನಾಗಿ ಹಾಜರಾಗುತ್ತಿದ್ದರೆ, 

ನೈತಿಕ ಅಧಃಪತನವನ್ನು ಒಳಗೊಳ್ಳುವ ಒಂದು ಅಪರಾಧಕ್ಕಾಗಿ ಕ್ರಿಮಿನಲ್ ನ್ಯಾಯಾಲಯದಿಂದ ಶಿಕ್ಷಿತನಾಗಿದ್ದು ಮತ್ತು ಅಂತಹ ಶಿಕ್ಷೆಯನ್ನು ಹಿಂತೆಗೆದುಕೊಂಡಿದ್ದರೆ ಅಥವಾ ಅಪರಾಧವನ್ನು ಕ್ಷಮಿಸಿರದಿದ್ದರೆ, ಯಾವಾಗಲಾದರೂ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದರೆ ಅಥವಾ ಅಂತಹ ಸಂಸ್ಥೆಯ ಅರ್ಚಕರಾಗಿ ಅಲ್ಲದೆ ಯಾವುದೇ ಪದವಿಯನ್ನು ಧಾರಣೆ ಮಾಡಿದ್ದರೆ ಅಥವಾ ಒಬ್ಬ ನೌಕರನಾಗಿದ್ದರೆ ಅಥವಾ ಅಂತಹ ಸಂಸ್ಥೆಯಿಂದ ಯಾವುದೇ ಉಪಲಬ್ಧಿಗಳನ್ನು ಅಥವಾ ಅನುವಂಶಿಕ ಲಾಭವನ್ನು ಸ್ವೀಕರಿಸುವ ವ್ಯಕ್ತಿಯಾಗಿದ್ದರೆ, 

ಮದ್ಯಪಾನ ಅಥವಾ ಮಾದಕದ್ರವ್ಯ ವ್ಯಸನಿಯಾಗಿದ್ದರೆ, ಹಿಂದೂ ಅಲ್ಲದಿದ್ದರೆ ಅಥವಾ ಆಗಿದ್ದು ತರುವಾಯದಲ್ಲಿ ಯಾವುದೇ ಇತರೆ ಧರ್ಮಕ್ಕೆ ಪರಿವರ್ತಿತನಾಗಿದ್ದರೆ, ಅವನು ಯಾವುದೇ ಅಧಿಸೂಚಿತ ಸಂಸ್ಥೆಯ ವ್ಯವಸ್ಥಾಪನಾ ಸಮಿತಿ ಸದಸ್ಯನಾಗಿ ನೇಮಕಗೊಳ್ಳಲು ಅಥವಾ ಮುಂದುವರೆಯಲು ಅನರ್ಹನಾಗಿರುತ್ತಾನೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 ಹೆಚ್ಚಿನ ಮಾಹಿತಿ ಹಾಗೂ ದೇವಾಲಯಗಳ ಮಾಹಿತಿಗಾಗಿ ಆಯಾ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸುವುದಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು