ಸುದ್ದಿಲೈವ್/ಶಿವಮೊಗ್ಗ
ಅಚ್ಚರಿ ಪಡಿಸುವ ವಿಷಯವೆಂದರೆ ಸಣ್ಣ ಮಳೆಗೂ ಜಲಾವೃತಗೊಳ್ಳುತ್ತಿದ್ದ ನವುಲೆ ಕೆಎಸ್ ಸಿಎ ಮೈದಾನ ಇಂದು ಸುರಿದ ಮಳೆಗೆ ನಕ್ಕು ನಲಿದಿದೆ. ಹಾಗಾದರೆ ಈ ಕೆರೆಯ ಸಮಸ್ಯೆಗಳೆಲ್ಲಾ ನಿವಾರಣೆ ಆಗ್ಬಿಡ್ತಾ ಎಂದು ಯೋಚಿಸಿದರೆ ಒಂದು ರೋಚಕ ಸತ್ಯ ಹೊರಬೀಳುತ್ತಿದೆ.
31 ಎಕರೆ ನವುಲೆ ಕೆರೆಯಲ್ಲಿ 2006 ರಲ್ಲಿ 26 ಎಕರೆಯನ್ನ ಕೆಎಸ್ ಸಿಎ ಮೈದಾನಕ್ಕೆ ಇಕ್ಕೇರಿಯವರು ಡಿಸಿ ಇದ್ದಾಗ ಬಿಟ್ಟುಕೊಡಲಾಯಿತು. 2009 ರ ನಂತರ ಕೆರೆ ಏರಿಯಾದಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣವಾಗಿದೆ. ಆದರೆ ಡಿಸಿ ಇಕ್ಕೇರಿಯವರು ಕೆರೆಯನ್ನ ಅಭಿವೃದ್ಧಿ ಪಡಿಸುವುದು ಕೆಎಸ್ ಸಿಎಗೆ ಜವಬ್ದಾರಿ ನೀಡಿ ಅಗ್ರಿಮೆಂಟ್ ಸಹ ಮಾಡಿದ್ದಾರೆ. ಈ ಅಗ್ರಿಮೆಂಟ್ ಕಾಗದದ ಮೇಲೆ ಅಷ್ಟೆ ಎಂಬುದು ಅಷ್ಟೇ ಸತ್ಯ.
ವಿಪರ್ಯಾಸವೆಂದರೆ ಕೆರೆ ಅಭಿವೃದ್ಧಿಗೊಂಡರೆ ಮೈದಾನ ಮತ್ತೆ ಕೆರೆಯಂತಾಗುತ್ತದೆ ಎಂಬ ದುರಾಲೋಚನೆಯಿಂದಾಗಿ ರಾತ್ರೋರಾತ್ರಿ ಒಂದು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಆ ಮಾಸ್ಟರ್ ಪ್ಲಾನ್ ಯಾರಿಗೂ ಗೊತ್ತಾಗದಂತೆ ಎಕ್ಸಿಕ್ಯೂಟ್ ಆಗಿದ್ದೆ ಆಗಸ್ಟ್ ತಿಂಗಳಲ್ಲಿ.
ಆಗಸ್ಟ್ ನಲ್ಲಿ ಕೊಳವೆ ಮೂಲಕ ಮೈದಾನದ ನೀರು ನಿಲ್ಲದಂತೆ, ನವುಲೆ ಚಾನೆಲ್ ಗೆ ಸಂಪರ್ಕ ಸಾಧಿಸಲಾಗಿದೆ. 100 ಅಡಿ ಕೊಳವೆಯನ್ನ ಒಳಗೆ ಕೊರೆದು ಚಾನೆಲ್ ಗೆ ಸಂಪರ್ಕಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಕೆರೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಲಾಗಿದೆ.
ಈ ಕೊಳವೆ ಇತ್ತೀಚೆಗೆ ಕಸಕಡ್ಡಿಗಳಿಂದ ಕಟ್ಟಿಕೊಂಡಿತ್ತು. ಒಂದುವಾರದ ಹಿಂದೆ ಈಶ್ವರ್ ಮಲ್ಪೆ ಬಂದು ಹೋಗಿದ್ದಾರೆ. ಈಶ್ವರ್ ಮಲ್ಪೆ ಎಂಬುವರು ಮುಳುಗ ತಜ್ಞರು, ಮಲ್ಪೆಯ ಸಮುದ್ರದಲ್ಲಿ ಮುಳುಗುವವರನ್ನ ರಕ್ಷಿಸುವ, ಮುಳುಗಿ ಜೀವಕಳೆದುಕೊಂಡರೆ ಮೃತದೇಹವನ್ನ ಹುಡುಕಿಕೊಡಲು ಈಶ್ವರ್ ಮಲ್ಪೆಯನ್ನ ಬಳಸಿಕೊಳ್ಳಲಾಗುತ್ತದೆ.
ಇಂತಹ ಮುಳುಗು ತಜ್ಞನನ್ನ ಕರೆಯಿಸಿ ಕೊಳವೆಯಲ್ಲಿ ಸಿಲುಕಿಕೊಂಡ ಕಸಕಡ್ಡಿಯನ್ನ ತೆಗೆಸಲಾಗಿದೆ. ಇಂದು ಇಡೀ ಶಿವಮೊಗ್ಗವೇ ನೀರಾಗಿ ಹೋಗಿತ್ತು. ತುಂಬ ಬಾರದ ರಾಜಕಾಲುವೆಗಳೆಲ್ಲಾ ಮೈದುಂಬಿಕೊಂಡಿತ್ತು.
ಆದರೆ ಕೆಎಸ್ ಸಿಎ ಮೈದಾನ ಮಾತ್ರ ನಕ್ಕು ನಲಿದಿತ್ತು. ಸಣ್ಣಮಳೆಗೆ ಜಲಾವೃತಗೊಳ್ಳುತ್ತಿದ್ದ ಮೈದಾನ ಇಂದು ಸುರಕ್ಷಿತವಾಗಿದೆ. ಆದರೆ ಕೆರೆ ಅಂಗಳ ಮಾತ್ರ ಬರಿದಾಗಿದೆ. ಒಂದು ವ್ಯವಸ್ಥಿತವಾಗಿ ಕೆರೆಯ ಅಂಗಳವನ್ನ ಖಾಲಿ ಮಾಡಿರುವ ಮಾಸ್ಟರ್ ಪ್ಲಾನ್ ಯಾರದ್ದು ಎಂಬುದು ಬಹಿರಂಗಗೊಳ್ಳಬೇಕಿದೆ. ಕೆರೆಸಂರಕ್ಷಣ ಪ್ರಾಧಿಕಾರ ಚಿರನಿದ್ರೆಗೆ ಜಾರಿದೆ.