ಸುದ್ದಿಲೈವ್/ಸಾಗರ
ಸದಾ ಚಟುವಟಿಕೆಯಿಂದ ಕೆಲಸ ಮಾಡುವ ಹಾಗೂ ಇಳಿವಯಸ್ಸಿನಲ್ಲೂ ರಾಜಕೀಯವಾಗಿ ಹೈಪರ್ ಆಕ್ಟಿವ್ ಆಗಿರುವ ರಾಜಕೀಯ ಮುತ್ಸದ್ಧಿ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಾಗರ ತಾಲೂಕಿಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ. ತಂದೆಯವರಿಗೆ ಸಂಸದ ರಾಘವೇಂದ್ರ ಸಾತ್ ನೀಡಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬದ ನಿಮಿತ್ತ ನಿನ್ನೆ ಸಾಗರದ ಸುಪ್ರಸಿದ್ಧ ಶಕ್ತಿ ಕೇಂದ್ರವಾದ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಡಿನ ಸಮೃದ್ಧಿಗಾಗಿ ಹಾಗೂ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಬಲ ನೀಡುವಂತೆ ತಾಯಿಯಲ್ಲಿ ಭಕ್ತಿಯಿಂದ ನಿವೇದಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಇದಾದ ನಂತರ ಸಾಗರ ತಾಲ್ಲೂಕಿನ ಸಿಂಹಪುರ ಶುಭಸ್ಥಾನದ ಭಗವಾನ್ ಶ್ರೀ 1008 ನೇಮಿನಾಥ ಸ್ವಾಮಿ ಬಸದಿಗೆ ಭೇಟಿ ನೀಡಿ ಪ.ಪೂ. ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹಾಗೂ ಆಚಾರ್ಯ 108 ಸಮಯಸಾಗರ ಮಹಾರಾಜರು ಅವರುಗಳ ದಿವ್ಯಾಶೀರ್ವಾದ ಪಡೆದುಕೊಳ್ಳುಲಾಯಿತು.
ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಕೆ.ಪಿ.ಸಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆಯನ್ನ ಮಾಡಿದ್ದಾರೆ.
ಜೋಗ ಜಲಪಾತವನ್ನು ವಿಶ್ವದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹಾಗೂ ಆರ್ಥಿಕ ಪ್ರಗತಿಗೆ ಹೆಚ್ಚಿನ ಬಲ ನೀಡಬೇಕು ಎಂಬುದು ಬಿಎಸ್ ವೈ ಅವರ ಅತೀವ ಹೆಬ್ಬಯಕೆಯಾಗಿತ್ತು. ತಾವುಗಳು ಸಿಎಂ ಆಗಿದ್ದಾಗ ಜೋಗ ಅಭಿವೃದ್ಧಿಗೆ 85 ಕೋಟಿ ಬಿಡುಗಡೆ ಮಾಡಿದ್ದರು. ಇದರಿಂದ ಜೋಗಕ್ಕೆ ವಿಶ್ವ ದರ್ಜೆಗೆ ಏರಿಸುವ ಕನಸನ್ನ ಅವರು ಹೊಂದಿದ್ದರು.
ಈ ಹಿನ್ನಲೆಯಲ್ಲಿ ಅಪ್ಪ ಮತ್ತು ಮಗನ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ಪ್ರಮುಖರಾದ ಶ್ರೀ ಬಸವರಾಜ್ ಅವರು, ಶ್ರೀ ನವೀನ್ ಜೈನ್ ಅವರು ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದರು.
ಸಿಗಂಧೂರು ದೇವಸ್ಥಾನಕ್ಕೆ ಭೇಟಿ ನೀಡಿದ ಸಮಯದಲ್ಲಿ ಧರ್ಮದರ್ಶಿಗಳಾದ ಶ್ರೀ ರಾಮಪ್ಪ ಅವರು, ಪ್ರಮುಖರಾದ ಗುರುಮೂರ್ತಿ, ದತ್ತಾತ್ರೇಯ, ಹಕ್ಕರೆ ಮಲ್ಲಿಕಾರ್ಜುನ್, ಸುಧೀಂದ್ರ ಸೇರಿದಂತೆ ಪಕ್ಷದ ಮಂಡಲದ ಅನೇಕ ಮುಖಂಡರು ಜೊತೆಗಿದ್ದರು.