Girl in a jacket

ಎನ್.ಇ.ಪಿಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳ ಕಥೆ ಏನು ಈವಾಗ?

 


ಸುದ್ದಿಲೈವ್/ಶಿವಮೊಗ್ಗ

ಎನ್.ಇ.ಪಿ.ಪಠ್ಯಕ್ರಮದ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಈಗ 3 ವರ್ಷದ ಪದವಿ ಮುಗಿಸಿದ್ದಾರೆ. ಅವರಿಗೆ ಎನ್.ಇ.ಪಿ.ಪ್ರಕಾರ 4ನೇ ವರ್ಷದ ಹಾನಸ್೯ ಪದವಿಗೆ ಪ್ರವೇಶ ಪಡೆಯಲು ಸಕಲ ವ್ಯವಸ್ಥೆ ಆಗಬೇಕು. ಆದರೆ ಕುವೆಂಪು ವಿಶ್ವವಿದ್ಯಾಲಯದಿಂದ ಇದುವೆರೆಗೂ ಯಾವ ಮಾರ್ಗಸೂಚಿಯಾಗಲೀ, ಸಿದ್ಧತೆಗಳಾಗಲೀ ಆಗಿಲ್ಲ. ಈಗ ತಾವು ಏನು ಮಾಡಬೇಕು ಎಂದು ವಿದ್ಯಾರ್ಥಿಗಳು  

ಕುವೆಂಪು ವಿವಿಯನ್ನು ಪ್ರಶ್ನಿಸುತ್ತಿದ್ದಾರೆ. ಕಾಲೇಜಿನ ಈ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗಿ ಒಂದು ತಿಂಗಳಾಗುತ್ತ ಬಂದರೂ ನಾಲ್ಕನೇ ವರ್ಷದ ಹಾನಸ್೯ ಪದವಿ ತರಗತಿಗಳ ಆರಂಭಕ್ಕೆ ಇಂದಿನ ವರೆಗೂ ಏನೂ ಪ್ರಸ್ತಾಪವೇ ಇಲ್ಲದಿರುವುದು ವಿದ್ಯಾರ್ಥಿ-ಪಾಲಕರಲ್ಲಿ ಗೊಂದಲ ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದೆಡೆ ಎನ್.ಎಸ್.ಎಸ್. ಎನ್.ಸಿಸಿ, ರೇಂಜಸ್೯, ಕ್ರೀಡೆ, ಸಾಂಸ್ಕೃತಿಕ ವಿಷಯಗಳ  ಅಂಕಗಳ ಸೇರ್ಪಡೆಗೆ ಯುಯುಸಿಎಂಎಸ್ ಸಾಫ್ಟ್ ವೇರ್ ನಲ್ಲಿಯ ತಾಂತ್ರಿಕ ದೋಷದಿಂದ ನೂರಾರು ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿಯಲ್ಪಟ್ಟರೆಇನ್ನೊಂದೆಡೆ

 ಹಾನಸ್೯ ಪದವಿ ಬಗ್ಗೆ ವಿವಿ ನಿರ್ಣಯ ಕೈಗೊಳ್ಳದೆ PG ಕೋಸ್೯ಗಳಿಗೆ ಪ್ರವೇಶಾತಿ ಅಧಿಸೂಚನೆ ಹೊರಡಿಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 

 ಈ ವರ್ಷದಿಂದ ರಾಜ್ಯದಲ್ಲಿ ಎಸ್.ಇ.ಪಿ. ಪಠ್ಯಕ್ರಮ ಜಾರಿಯಾಗಿದೆ. ಇದರಿಂದ ಉಪನ್ಯಾಸಕರಿಗೆ ಪ್ರತಿ ವಿಷಯದಲ್ಲಿ ಎನ್.ಇ.ಪಿ.ಪದ್ಧತಿಯಲ್ಲಿದ್ದುದಕ್ಕಿಂತ ವಾರದ ಕಾರ್ಯಭಾರ ಕಡಿಮೆಯಾಗಿದೆ. ಪಾಠ ಮಾಡುವ ಪಠ್ಯಕ್ರಮದ ಒತ್ತಡ ಉಪನ್ಯಾಸಕರ ಮೇಲೆ ಹೆಚ್ಚಾಗಿದೆ ಎನ್ನಲಾಗಿದೆ.

ಇದನ್ನು ಸರಿದೂಗಿಸಲು ಬೇರೆ ವಿವಿಗಳಲ್ಲಿ ಕಾರ್ಯಭಾರ ಹೆಚ್ಚಿಸಿ ವಾರಕ್ಕೆ 6 ಅವಧಿಯ ಕಾರ್ಯಭಾರ ನಿಗಧಿಪಡಿಸಲಾಗಿದೆ. ಆದರೆ ಕುವೆಂಪು ವಿವಿಯಿಂದ ಅದು ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.

 ಈ ಕುರಿತು ಎಲ್ಲ ವಿಷಯಗಳ ಅಧ್ಯಯನ ಮಂಡಳಿ (ಬಿಒಎಸ್) ವಿವಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವ ಕ್ರಮವೂ ಆಗಿಲ್ಲ ಎಂದು ತಿಳಿದು ಬಂದಿದೆ.

 ಕಾಲೇಜುಗಳಲ್ಲಿ ಸೆಮಿಸ್ಟರ್ ಕ್ಲಾಸೆಸ್ ಆರಂಭವಾಗಿವೆ. ಆದರೆ ಬಹುತೇಕ ಉಪನ್ಯಾಸಕರು  ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯಕ್ಕೆ ಹೋಗುತ್ತಿದ್ದುದರಿಂದ ಕಾಲೇಜುಗಳಲ್ಲಿ ಕಳೆದ 15-20ದಿನಗಳಿಂದ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಶೈಕ್ಷಣಿಕ ಹಾನಿಯನ್ನು  ತುಂಬಿಕೊಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ಆಂತರಿಕ ಪರೀಕ್ಷೆ, ಸೆಮಿಸ್ಟರ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಪೂರೈಸುವ ಉತ್ತರ ಪತ್ರಿಕೆ ತೀವ್ರ ಕಳಪೆ ಗುಣಮಟ್ಟದ್ದಾಗಿದೆ. ಪ್ರತಿ ಪರೀಕ್ಷೆಗಳಲ್ಲಿ ಈ ಉತ್ತರ ಪತ್ರಿಕೆಗಳ ಹಾಳೆಗಳು ಹರಿದು ಹೋಗುತ್ತಿವೆ. ಅಥವಾ ಪರೀಕ್ಷೆಯ ಕೊಠಡಿಗಳಲ್ಲಿ ಸ್ಟ್ಯಾಪ್ಲರ್ ಹಿಡಿದು ಪಿನ್ ಹೊಡೆಯುವ ಕಾರ್ಯ ಸರ್ವೇಸಾಮಾನ್ಯವಾಗಿದೆ ಎಂದು ಪ್ರಾಚಾರ್ಯ ಸಿಬ್ಬಂದಿಗಳ ಅಂಬೋಣವಾಗಿದೆ. 

ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಮೈಮೇಲೆ ಹೊದ್ದು ಮಲಗಿರುವ ವಿವಿ ಆಡಳಿತ ಎಚ್ಚೆತ್ತುಕೊಳ್ಳುವುದು ಯಾವಾಗ ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live