ಕೊಲೆ ಯತ್ನ ನಡೆಸಿದ ಆರೋಪಿಗೆ ಶಿಕ್ಷೆ



ಸುದ್ದಿಲೈವ್/ಶಿವಮೊಗ್ಗ


ಹಣಕೊಡುವುದಾಗಿ ನಂಬಿಸಿ ಕೊಲೆ ಮಾಡುವ ಉದ್ದೇಶದಿಂದ ಚಾಕು ಇರಿದ ಪ್ರಕರಣದಲ್ಲಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ತೀರ್ಪು ನೀಡಿ ಆದೇಶಿಸಿದೆ. 


ಶಿರಾಳಕೊಪ್ಪ ಟೌನ್‌ನ ದಾಸರ ಕಾಲೋನಿ ನಿವಾಸಿ,  ಹಯಾತ್ ಸಾಬ್ (31) ಮತ್ತು ಹಳ್ಳೂರು ಕೇರಿಯ ನಿವಾಸಿ ಜಿಯಾವುಲ್ಲಾ ಖಾನ್ (24),  ಇಬ್ಬರಿಗೂ ಈ ಹಿಂದಿನಿಂದಲೂ ಮಾವಿನ ತೋಟದ ಗುತ್ತಿಗೆಯ ವಿಚಾರವಾಗಿ ಹಣ ಕಾಸಿನ ವ್ಯವಹಾರವಿತ್ತು. ಹಯಾತ್ ಸಾಬ್‌ನು,  ಜಿಯಾವುಲ್ಲಾ ಖಾನ್‌ನಿಗೆ 25,000/- ರೂ ಹಣ ಕೊಡಲು ಬಾಕಿ ಇರುತ್ತದೆ. 


ಜಿಯಾವುಲ್ಲಾ ಖಾನ್‌ನು ಸದರಿ ಹಣವನ್ನು ಹಿಂದಿರುಗಿಸಲು ಕೇಳಿದಾಗ ದಿನಾಂಕಃ 15-05-2022 ರಂದು ಬೆಳಗ್ಗೆ ಹಯಾತ್ ಸಾಬ್ ನು ಜಿಯಾವುಲ್ಲಾಖಾನ್ ಗೆ  ಕರೆ ಮಾಡಿ, ಶಿರಾಳಕೊಪ್ಪ ಟೌನ್‌ನ ಅಣ್ಣಪ್ಪ ಟಿ ಹೋಟೆಲ್‌ಗೆ ಬಾ ಹಣ ಕೊಡುತ್ತೇನೆಂದು ತಿಳಿಸಿರುತ್ತಾನೆ.  


ಜಿಯಾವುಲ್ಲಾಖಾನ್ ನು ಅಲ್ಲಿಗೆ ಹೋದಾಗ ಹಯಾತ್ ಸಾಬ್ ನು ನಿನಗೆ ನಾನು ಯಾವ  ಹಣ ಕೊಡಬೇಕು, ಪದೇ ಪದೇ ಕೇಳುತ್ತೀಯ ಎಂದು ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ಜಿಯಾವುಲ್ಲಾಖಾನ್ ನ ಬೆನ್ನಿಗೆ ಹಲ್ಲೆ ಮಾಡಿರುತ್ತಾನೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗಾಯಾಳು ಜಿಯಾವುಲ್ಲಾ ಖಾನ್ ದೂರು ದಾಖಲಿಸಿದ್ದನು.‌


ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ರಮೇಶ್, ಶಿರಾಳಕೊಪ್ಪ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದರು. 


ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ  ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು  ಆರೋಪಿತನಾದ ಹಯಾತ್ ಸಾಬ್, 31 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್ ಈತನಿಗೆ  01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ಮತ್ತು ರೂ 15,000/- ದಂಡ ವಿಧಿಸಿದ್ದಾರೆ.


ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  5,000 ರೂಗಳನ್ನು  ಗಾಯಾಳು ಜಿಯಾವುಲ್ಲಾ ಖಾನ್ ರವರಿಗೆ ನೀಡಲು ಆದೇಶಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು