ನಾಗಮಂಗಲ ಘಟನೆ ಖಂಡಿಸಿ ಶಿವಮೊಗ್ಗದಲ್ಲಿ ಭರ್ಜರಿ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

 

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ  ಗಲಭೆಯನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಅಗ್ರಹಿಸಿ, ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ಶಿವಪ್ಪ ನಾಯಕ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.



ಪ್ರತಿಭಟನೆಯಲ್ಲಿ  ಸಾಮಾಜಿಕ ಹಿಂದು ಹೋರಾಟಗಾರರು ಮತ್ತು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ್ ಅರಳಿಹಳ್ಳಿ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಿನ್ನೆ ನಾಗಮಂಗಲದ ಬದರಿ ಕೊಪ್ಪದಲ್ಲಿ ನಡೆಯುತ್ತಿದ್ದ ಗಣಪತಿ ವಿಸರ್ಜನೆಯ ಮೆರವಣಿಗೆಯ ಸಮಯದಲ್ಲಿ ಮಸೀದಿ ಮುಂದೇ ಗಣಪತಿ ಹೋಗಬಾರದೆಂದು ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮತ್ತು ಚಪ್ಪಲಿ ತೂರಾಟ ಮಾಡಿ ಗಲಭೆ ಸೃಷ್ಟಿಸಿರುವ ಅನ್ಯಕೋಮಿನ ಗಲಭೆಕೋರರ ಕೃತ್ಯವನ್ನು ಖಂಡಿಸುತ್ತೇವೆ. ಕಳೆದ ವರ್ಷ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಮಾತಿನ ಚಕಮುಕಿ ನಡೆದಿದೆ ಆದರೂ ಈ ವರ್ಷ ಮುಂಜಾಗ್ರತೆ ಕ್ರಮ ಸರಿಯಾಗಿ ತೆಗೆದುಕೊಳ್ಳದೆ ಇರುವ ನಿರ್ಲಕ್ಷ ವಹಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಗೊಳಿಸಬೇಕು. 


ರಾಜ್ಯದಲ್ಲಿ ಬ್ರದರ್ಸ್ ಗಳು ನಡೆಸುತ್ತಿರುವ  ಕೃತ್ಯಗಳ ಮೇಲೆ ಸರ್ಕಾರ ಕಾನೂನು ಕ್ರಮ ತೆಗೆದು ಕೊಂಡರೆ ಒಳಿತು ಇಲ್ಲ ಅಂತ ಹೇಳಿದ್ರೆ ಹಿಂದೂ ಸಮಾಜದ ತಾಳ್ಮೆ ಸಿಡಿದೆಳುತ್ತದೆ. ಈ ದಿನ ಗೃಹ ಸಚಿವರು ಗೌರವಿತವಾದ ಸ್ಥಳದಲ್ಲಿ ಇದ್ದುಕೊಂಡು ಕೊಟ್ಟ ಹೇಳಿಕೆ ಸರಿಯಲ್ಲ. ಆಕಸ್ಮಿಕವಾಗಿ ಕಲ್ಲು ತೂರಾಟ ಮಾಡಿದ್ದಾರೆ ಎಂದು ಹೇಳಿರುವುದು‌ ಖಂಡನೀಯ ಎಂದರು.


ಮಸೀದಿಯ ಮುಂದೆ ಗಣಪತಿ ಮೆರವಣಿಗೆ ಬಂದಾಗ ಕಲ್ಲು ತೂರಾಟ ಮಾಡಿ ಪೆಟ್ರೋಲ್ ಬಾಂಬ್ ಹಾಕಿರುವುದು,  ತಲ್ವಾರ್‌ಗಳನ್ನ ಕೈನಲ್ಲಿ ಹಿಡಿದಿರುವುದು  ನೋಡಿದರೆ ಇದು ನೂರಕ್ಕೆ ನೂರು ಪೂರ್ವ ಯೋಜಿತ ಭಯೋತ್ಪಾದಕ ಕೃತ್ಯವಾಗಿದೆ. ಈ ಕೃತ್ಯದ ಹಿಂದೆ ಯಾವ ಭಯೋತ್ಪಾದಕ ಸಂಘಟನೆಯ ನಂಟಿದೆ ಎಂಬುದು ತನಿಖೆ ಆಗಬೇಕು. ಈ ಒಂದು ಪ್ರಕರಣವನ್ನು NIA ರವರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು. 


ಸರ್ಕಾರ ಎಚ್ಚೆತ್ತುಕೊಳ್ಳಬೇಕು ಇದೇ ರೀತಿ ಘಟನೆಗಳು ಮುಂದುವರೆದರೆ ಹಿಂದೂ ಸಮಾಜವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಹಿಂದೂ ಸಮಾಜಕ್ಕೆ ಗೊತ್ತಿದೆ ಎಂದು ಗುಡುಗಿದರು. ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ಪ್ರಮುಖರಾದ ಶಿವಕುಮಾರ್, ವಕೀಲರಾದ ಸುರೇಶ್ ಬಾಬು, ಗುರು, ಪವನ, ಸೆಲ್ವಂ, ರಘುವರನ್ ಮುಂತಾದವರು ಉಪಸ್ಥಿತಿ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು