ಏನಿದು ನಗು-ಮಗು ಅಂಬ್ಯುಲೆನ್ಸ್‌ನ ಚಾಲಕನ ವಿರುದ್ಧದ ಆರೋಪ?



ಸುದ್ದಿಲೈವ್/ರಿಪ್ಪನ್‌ಪೇಟೆ 

ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗುವನ್ನು ಶಿವಮೊಗ್ಗಕ್ಕೆ ರವಾನಿಸುತಿದ್ದ ಆಂಬುಲೆನ್ಸ್ ಗ್ಯಾಸ್ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ನಡೆದಿದೆ.


ಶನಿವಾರ ರಾತ್ರಿ ಪಟ್ಟಣದ ಸಮೀಪದ ದೂನ ಗ್ರಾಮದಲ್ಲಿ ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ಲಾರಿಗೆ ನಗು ಮಗು ಆಂಬುಲೆನ್ಸ್ ಡಿಕ್ಕಿಯಾಗಿ ಬಾಣಂತಿ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ. 


ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಗೊಳಗಾದ ಮಗುವನ್ನು ನಗುಮಗು ಆಂಬುಲೆನ್ಸ್ ನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗುತಿತ್ತು ಆದರೆ ಆಂಬುಲೆನ್ಸ್ ಚಾಲಕ ಬಾಲಚಂದ್ರ ಎಂಬಾತನು ಪಾನಮತ್ತನಾಗಿ ವಾಹನ ಚಲಾಯಿಸಿದ್ದರಿಂದ ದೂನ ಸಮೀಪದಲ್ಲಿ ಗ್ಯಾಸ್ ಟ್ಯಾಂಕರ್ ಗೆ ಹಿಂಬದಿಯಿಂದ ಡಿಕ್ಕಿಯಾಗಿ ಆಂಬುಲೆನ್ಸ್ ನಲ್ಲಿದ್ದ ತಾಯಿ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ. 

ಇದೇ ಸಮಯಕ್ಕೆ ಸರಿಯಾಗಿ ಮತ್ತೊಂದು 108 ಆಂಬುಲೆನ್ಸ್ ಈ ಮಾರ್ಗವಾಗಿ ಬಂದಿದ್ದು ಗಾಯಾಳುಗಳನ್ನು 108 ಆಂಬುಲೆನ್ಸ್ ಗೆ ಶಿಫ್ಟ್ ಮಾಡಲು ಹೊರಟಾಗ ಕುಟುಂಬಸ್ಥರು 'ಆಂಬುಲೆನ್ಸ್ ಸಹವಾಸವೇ ಬೇಡ' ಎಂದು ಖಾಸಗಿ ಕಾರಿನಲ್ಲಿ ತಾಯಿ ಮಗುವನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದ್ದಾರೆ. 


ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ತೆರಳಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ಪಾನಮತ್ತ ಚಾಲಕನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಸವ ವೇದನೆ ಅನುಭವಿಸುವವರನ್ನು ಸರಕಾರಿ ಆಸ್ಪತ್ರೆಗಳಿಗೆ ಕರೆತಂದರೆ, ಹೆರಿಗೆ ನಂತರ ಬಾಣಂತಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆ ತಲುಪಿಸಲು ರಾಜ್ಯ ಸರಕಾರ, ‘ನಗು ಮಗು ಆಂಬ್ಯುಲನ್ಸ್’ ಸೇವೆ ಜಾರಿಗೆ ತಂದಿದ್ದು ಆದರೆ ಆಂಬುಲೆನ್ಸ್ ಚಾಲಕನೇ ಪಾನಮತ್ತನಾಗಿ ಮಗುವಿನ ನಗು ಕಸಿದು ಉಸಿರು ತೆಗೆಯಲು ಹೊರಟರೇ ಬಾಣಂತಿ ಮಗುವಿನ ಪಾಡನ್ನು ಕೇಳೋರ್ಯಾರು..!!?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket