ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ



ಸುದ್ದಿಲೈವ್/ತೀರ್ಥಹಳ್ಳಿ


ತೀರ್ಥಹಳ್ಳಿ ತಾಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀ ಉದ್ದದ ಗ್ರಾನೈಟ್ ಶಿಲೆಯ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ. 


ಶಿರ ಛೇದನ ಸ್ಮಾರಕ ಶಿಲ್ಪದ ಕುರಿತು: 


ಶಿಲ್ಪವು ಎರಡು ಪಟ್ಟಿಕೆಗಳಿಂದ ಕೂಡಿದ್ದು ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ/ಗರುಡ ಹೋಗುವ ವೀರ ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದಿದ್ದಾನೆ. ಇವನಿಗೆ ಹಿಂಭಾಗದಲ್ಲಿ ಛತ್ರಿಯನ್ನು ಸೇವಕ ಹಿಡಿದಿದ್ದಾನೆ. ಆದ್ದರಿಂದ ಇವನನ್ನು ರಾಜ ಪ್ರಮುಖನೆಂದು ತಿಳಿಯಬಹುದಾಗಿದೆ. ಹಿಂಭಾಗದಲ್ಲಿ ಮಹಿಳೆಯು ಕತ್ತಿಯನ್ನು ಹಿಡಿದು ನಿಂತಿದ್ದಾಳೆ.


ಎರಡನೇ ಪಟ್ಟಿಕೆ: 


ಗರುಡ ಹೊದಾಂತಹ ವೀರನು ವೀರಾಸನದಲ್ಲಿ ನಿಂತಿದ್ದು ರುಂಡವನ್ನು ಕತ್ತರಿಸಲಾಗಿದ್ದು ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಮುಂಡದ ಮೇಲೆ ಹಲಗೆಯ ರೀತಿಯನ್ನು ಹೊತ್ತುಕೊಂಡಿದು ಇದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರ ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರ ಛೇದನವಾದ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ.


ಮೂರನೇ ಪಟ್ಟಿಕೆ: 


ಇಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಇದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗದ/ಕಂಬದ ಮೇಲೆ ಸಮತಟ್ಟಾಗಿದೆ.


ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪದ ಮಹತ್ವ:


ಆತ್ಮಬಲಿದಾನವು ಹಿಂದೂಗಳ ದೃಷ್ಟಿಯಲ್ಲಿ ಮಹತ್ವ ಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ ತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದ್ದು, ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ(ದೇಹತ್ಯಾಗ) ಎನ್ನಬಹುದು. 


ಆತ್ಮಬಲಿದಾನವು ಆತ್ಮಹತ್ಯೆಗಿಂತ ವಿಶೇಷವಾಗಿದ್ದು ಇದು ಸಮಾಜದ ಒಳತಿಗೋಸ್ಕರ ಆಗಿರುವಂತಹದ್ದು ಹಾಗೂ ಪೂರ್ವ ನಿಯೋಜಿತವಾಗಿರುವಂತಹದ್ದು. ಈ ಆತ್ಮ ಬಲಿದಾನದಲ್ಲಿ ಹಲವು ಬಗೆಗಳಿವೆ. ಆತ್ಮಬಲಿದಾನವನ್ನು ಮಾಡಿಕೊಂಡ ವೀರರು ಯಾವುದೇ ಹೊರಾಟದಲ್ಲಿ ಹೊರಾಡಿ ಮಡಿದವರಾಗಿರುವುದಿಲ್ಲ. ಆದರೆ ಇವರು ಯಾವುದೇ ಹೋರಾಟದಲ್ಲಿ ಮಡಿದ ವೀರರಿಗಿಂತ ಇವರೇನು ಕಡಿಮೆಯಿರುವುದಿಲ್ಲ. 


ಆತ್ಮ ಬಲಿದಾನದಲ್ಲಿ ಚಿತಾಪ್ರವೇಶ, ಜಲಪ್ರವೇಶ, ಊರ್ಧ್ವಪತನದ ಬಗೆಗಳಿದ್ದು, ಚಿತಾ ಪ್ರವೇಶ ಎಂದರೆ ಬೆಂಕಿಗೆ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು, ಜಲಪ್ರವೇಶ ಎಂದರೆ ಗಂಗೆ, ವಾರಾಣಾಸಿ, ಪ್ರಯಾಗ, ತುಂಗಭದ್ರೆ ಮೊದಲಾದಡೆ ನೀರಿನಲ್ಲಿ ಮುಳುಗಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಹಾಗೂ ಊರ್ಧ್ವ ಬಲಿದಾನವೆಂದರೆ ಬೆಟ್ಟ, ಮರ ಹಾಗೂ ದೇವಾಲಯಗಳ ಶಿಖರಗಳಿಂದ ಕೆಳಗೆ ಬಿದ್ದು ಅಥವಾ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಎನ್ನಬಹುದು.


ಈ ಆತ್ಮಬಲಿದಾನದಲ್ಲಿ ಸಹಗಮನ ಪದ್ಧತಿ, ನಿಸಿಧಿ ಶಾಸನ ಶಿಲ್ಪಗಳು, ಸೂರ್ಯಗ್ರಹಣ ಶಾಸನ ಶಿಲ್ಪಗಳು ಇದರಲ್ಲಿ ಉರಿ ಉಯ್ಯಲೆ ಶಿಲ್ಪಗಳು, ಶೂಲ ಬಲಿ, ಶಿರ ಛೇದನ(ಬಲಿ) ಶಿಲ್ಪ, ಸಿಡಿದಲೆ ಶಾಸನ ಶಿಲ್ಪಗಳು, ಇರಿತ ಬಲಿ, ಬೆಂಕಿಬಲಿ ಶಿಲ್ಪ, ಕಿಳ್ಳುಂಟೆ, ಗರುಡ ಪದ್ಧತಿ ಹಾಗೂ ವಿಶೇಷವಾಗಿ ಚಾಟಿ ಏಟಿನಿಂದ ಆತ್ಮಬಲಿದಾನ ಮಾಡಿಕೊಂಡಿದ್ದು ಇವನ ಜೊತೆಯಲ್ಲಿ ಇವನ ಹೆಂಡತಿಯು ಸಹಗಮನ ಮಾಡಿಕೊಂಡಿರುವ ಆತ್ಮಬಲಿದಾನದ ಸ್ಮಾರಕ ಶಿಲ್ಪಮೊದಲಾದ ಆತ್ಮ ಬಲಿದಾನದ ಸ್ಮಾರಕ ಶಾಸನ ಶಿಲ್ಪಗಳು ಕರ್ನಾಟಕಲ್ಲಿ ಕಂಡುಬರುತ್ತವೆ.


ಈ ಸ್ಮಾರಕ ಶಿಲ್ಪವು ಇದುವರೆಗೂ ದೊರೆತಿರುವ ಶಿರ ಛೇದನ ಶಿಲ್ಪಗಳಲ್ಲಿ ತುಂಬಾ ಅಪರೂಪದ್ದು. ಈ ಸ್ಮಾರಕ ಶಿಲ್ಪವನ್ನು ಗರುಡ ಸ್ಥಂಬವೆಂದು ಕರೆಯಬಹುದಾಗಿದೆ. ಕರ್ನಾಟಕದಲ್ಲಿ ಇದುವರೆಗೂ ಗರುಡರಾಗಿರುವಂತಹ ಎರಡು ಸ್ಥಂಬಗಳು ಹಳೇಬೀಡು, ಅಗ್ರಹಾರ ಬಾಚಿಹಳ್ಳಿಯಲ್ಲಿ ಮಾತ್ರ ಕಂಡುಬಂದಿವೆ. ಇವು ಹೊಯ್ಸಳರ ಕಾಲದ್ದಾಗಿವೆ.


ಅರಗದಲ್ಲಿ ದೊರೆತಿರುವ ಈ ಶಿರ ಛೇದನ ಸ್ಮಾರಕ ಶಿಲ್ಪವು ಶಾಸನರಹಿತವಾಗಿದ್ದು, ಮೇಲ್ಬಾಗದಲ್ಲಿ ಲಿಂಗದ ಆಕೃತಿಯನ್ನು ಹೊಂದಿದ್ದರು ಹಳೇಬೀಡಿನಲ್ಲಿ ಕಂಡುಬರುವ ಸ್ಥಂಬದ ರೀತಿಯಲ್ಲಿದೆ. ಕೆಳ ಭಾಗದಲ್ಲಿ ಚೌಕಾಕರಾವಾಗಿದ್ದು ಶಿಲ್ಪಗಳಿಂದ ಕೂಡಿದೆ.ಲಿಂಗದ ರೀತಿಯ ಸ್ಥಂಬದ ಮೇಲ್ಬಾಗದಲ್ಲಿ ಚಪ್ಪಾಟೆಯಾಗಿದೆ. ಆದ್ದರಿಂದ ಇದನ್ನು ಶಿವಲಿಂಗ ಎಂದು ಹೇಳುವುದು ಕಷ್ಟವಾಗಿದೆ. ಈ ಭಾಗವು ಹಳೆಬೀಡಿನ ಗರುಡಸ್ಥಂಬದ ವೃತ್ತಾಕಾರದ ರೀತಿಯಲ್ಲಿದೆ ಅರಗ ಶಿಲ್ಪದ ವೃತ್ತಾಕಾರದ


ಸ್ಥಂಬದ ಬುಡದಲ್ಲಿ ಯಾವುದೇ ಚಿಕಣಿ ಶಿಲ್ಪಗಳಿಲ್ಲ ಆದರೆ ಲಿಂಗದ ಉಬ್ಬು ಶಿಲ್ಪವನ್ನು ಕಂಡರಿಸಲಾಗಿದೆ. ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೈಯಲ್ಲಿ ಹಿಡಿದಿರುವ ರುಂಡವನ್ನು ಮಹಿಳೆಯು ದೇವರಿಗೆ ಆರ್ಪಿಸಿ ಸತಿ ಹೊಗಿರಬಹುದು. ಗರುಡ ಹೋಗಿರುವಂತವರು ಶೈವರಾದಕಾರಾಗಿದ್ದು ರುಂಡವನ್ನು ಉಬ್ಬು ಶಿಲ್ಪದ ಲಿಂಗಕ್ಕೆ ಅರ್ಪಿಸಿದ್ದಾರೆ.


ಹೊಯ್ಸಳರ ಕಾಲದವರೆಗೆ ಇದ್ದಂತಹ ಗರುಡ ಪದ್ದತಿ ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರೆಯಿತು ಎಂದು ಈ ಗರುಡ ಪದ್ದತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಿಂದ ತಿಳಿಯಬಹುದಾಗಿದೆ. ಹಳೆಬೀಡು ಮತ್ತು ಅರಗದ ಸ್ಥಂಬಗಳನ್ನು ಗಮನಿಸಿದಾಗ ಒಟ್ಟಾರೆಯಾಗಿ ಗರುಡ ಪದ್ಧತಿಯಲ್ಲಿ ಇದೇ ರೀತಿಯ ಸ್ಥಂಬಗಳನ್ನು ಸ್ಥಾಪಿಸಿತಿದ್ದಿರಬೇಕು ಎಂಬುದನ್ನು ಊಹಿಸಬಹುದಾಗಿದೆ.


ಈ ಗರುಡ ಪದ್ಧತಿಯ ಸ್ಮಾರಕ ಶಿಲ್ಪದ ಬಗ್ಗೆ ಮಾಹಿತಿಯನ್ನು ಒದಗಿಸಿದ ಡಾ.ದೇವರಾಜಸ್ವಾಮಿ, ಡಾ. ಜಗದೀಶ. ಟಿ.ಎಂ.ಕೇಶವ ಡಾ.ಗಂಗಾಬಿಕೆ ಗೋವರ್ಧನ, ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್ ಇವರುಗಳಿಗೆ ಡಾ.ಆ‌ರ್.ಶೇಜೇಶ್ವರ, ನಿರ್ದೇಶಕರು(ಪುರಾತತ್ತ್ವ)(ಪ್ರ) ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು