ಹಣಗೆರೆಕಟ್ಟಯಲ್ಲಿ ಪ್ಯಾಲೆಸ್ತೇನ್ ಫ್ಲೆಕ್ಸ್-ಮಾಜಿ ಗೃಹ ಸಚಿವ ಆಕ್ಷೇಪ

 


ಸುದ್ದಿಲೈವ್/ತೀರ್ಥಹಳ್ಳಿ 


ತಾಲ್ಲೂಕು ಹಣಗೆರೆಯಲ್ಲಿ ರಾಷ್ಟ್ರ ವಿರೋಧಿ ಪ್ಲೆಕ್ಸ್ ಅಳವಡಿಕೆ ವಿಚಾರದ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ‌ 


ತೀರ್ಥಹಳ್ಳಿ ತಾಲ್ಲೂಕು, ಹಣಗೆರೆಯಲ್ಲಿ ಎರಡೂ ಧರ್ಮಿಯರ ಪ್ರಾರ್ಥನಾ ಸ್ಥಳವಿದ್ದು, ಮುಜರಾಯಿ ಇಲಾಖೆಯ ಆಡಳಿತದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಬೇರೆ ಬೇರೆ ಧಾರ್ಮಿಕ ಆಚರಣೆಯ ಜನ ಬಂದು ಹೋಗುವ ಸ್ಥಳವಾದರೂ ಕೂಡ ಸೌಹಾರ್ದತೆ, ಸಾಮರಸ್ಯಕ್ಕೆ ದಕ್ಕೆಯಾಗದೆ ಕಳೆದ ಹತ್ತಾರು ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳು, ಪೂಜಾ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿದೆ. 


ಮೊನ್ನೆ ನಡೆದ ಈದ್ ಮಿಲಾದ್ ಆಚರಣೆಯ ಸಂದರ್ಭದಲಿ ಪ್ಯಾಲೆಸ್ತೀನ್ ಪರವಾಗಿ ಭಾರತ ವಿರೋಧಿ ನೀತಿಯನ್ನು ಪ್ರತಿಪಾದಿಸುವ ಪ್ಲೆಕ್ಸ್ ಅಳವಡಿಕೆಯ ಕಾರ್ಯ ಕಿಡಗೇಡಿಗಳಿಂದ ನಡೆದಿದ್ದು, ಇದು ತೀರ್ಥಹಳ್ಳಿಯಂತಹ ಶಾಂತಿ ಸೌಹಾರ್ದತೆಯ ಕ್ಷೇತ್ರದ ಘನತೆಗೆ ದಕ್ಕೆ ತರುವ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಈಗಾಗಲೇ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ದೇಶದ ಹಲವು ಉಗ್ರಗಾಮಿ ಚಟುವಟಿಕೆ ನಡೆಸಿದವರ ಮೂಲ ತೀರ್ಥಹಳ್ಳಿಯಾಗಿದೆ ಎನ್ನುವುದು ಲಕ್ಷಾಂತರ ಕ್ಷೇತ್ರವಾಸಿಗಳಿಗೆ ಆತಂಕವನ್ನು ಉಂಟುಮಾಡಿದೆ.


ಈ ಎಲ್ಲಾ ಕಾರಣಗಳಿಂದಾಗಿ ಈ ಕೂಡಲೇ ಹಣಗೆರೆಯ ಪ್ಯಾಲೆಸ್ತೀನ್ ಪರವಾದ ಪ್ಲೆಕ್ಸ್ ಅಳವಡಿಕೆ ಪ್ರಕರಣದ ಹಿಂದಿನ ಶಕ್ತಿಗಳ ಬಗ್ಗೆ ಹಾಗೂ ಅವರ ಸಂಘಟನೆಯ ಮೂಲದ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ ಸಾರ್ವಜನಿಕರಲ್ಲಿರುವ ಆತಂಕವನ್ನು ದೂರಪಡಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು