ಶುಕ್ರವಾರ, ಸೆಪ್ಟೆಂಬರ್ 13, 2024

ಬೈಕ್ ಮೇಲೆ ಬಂದವರು ಉದ್ಯಮಿಗೆ ಚಾಕು ಇರಿದು ಪರಾರಿ


ಸುದ್ದಿಲೈವ್/ಶಿವಮೊಗ್ಗ


ನಗರದ ಊರಗಡೂರು ಸರ್ಕಲ್ ಬಳಿ ಉದ್ಯಮಿಯೊಬ್ಬರಿಗೆ ಬೈಕ್ ನಲ್ಲಿ ಬಂದ ಇಬ್ಬರು ಚಾಕು ಇರಿದು ಪರಾರಿಯಾಗಿದ್ದಾರೆ. ಸಧ್ಯಕ್ಕೆ ಪ್ರಾಣಾಪಾಯದಿಂದ ಉದ್ಯಮಿ ಪಾರಾಗಿದ್ದಾರೆ. 


ನಗರದ ಬೈಪಾಸ್ ಬಳಿ ಕಬ್ಬಿಣದ ವ್ಯಾಪಾರ ಮಾಡಿಕೊಂಡಿದ್ದ ನಾಸೀರ್ ಖಾನ್ ಮೇಲೆ ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಚಾಕು ಇರಿದು ಹೋಗಿದ್ದಾರೆ. ನಾಸೀರ್ ಖಾನ್ ಮದಾರಿಪಾಳ್ಯಕ್ಕೆ ಹೋಗುವಾಗ ಚಾಕು ಇರಿತವಾಗಿದೆ ಎನ್ನಲಾಗಿದೆ.  ಸಧ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ಚಾಕು ಇರಿತಕ್ಕೊಳಗಾದ ಉದ್ಯಮಿ ನಾಸೀರ್ ಖಾನ್  ಚಿಕಿತ್ಸೆ ಪಡೆದುಕೊಂಡು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಕೆ.ಟಿ ತನಿಖೆ ಕೈಗೊಂಡ ನಂತರ ಚಾಕು ಇರಿತದ ಬಗ್ಗೆ ಮಾಹಿತಿ ತಿಳಿದು ಬರಲಿದೆ. 


ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಹ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ನಮಾಜ್ ಮುಗಿಸಿಕೊಂಡು ಹೋಗುವಾಗ ಹಿಂದಿನಿಂದ ಬಂದು ಚಾಕು ಇರಿದ್ದಾರೆ. ಈ ಬಗ್ಗೆ ಸಿಸಿ ಟಿವಿ ಫೂಟೇಜ್ ಸಹ ಪರಿಶೀಲಿಸಲಾಗುತ್ತಿದೆ. ಎಲ್ಲಾ ರೀತಿಯಲ್ಲೂ ಈ ಪ್ರಕರಣವನ್ನ ಪರಿಶೀಲಿಸುವುದಾಗಿ ಹೇಳಿದ್ದಾರೆ. ಜಮೀನು ಖರೀದಿ ವಿಚಾರದಲ್ಲೂ ಸಹ ತಕರಾರು ಆಗಿದೆಯಾ ಎಂಬುದನ್ನೂ ಪರಿಶೀಲಿಸುವುದಾಗಿ ಹೇಳಿದ್ದಾರೆ. 


ಹಿಂದೆ ನಡೆದ ಘಟನೆ


ಈ ಹಿಂದೆ ಬಚ್ಚ ಶಿವಮೊಗ್ಗ ಕಾರಾಗೃಹದಲ್ಲಿದ್ದಾಗ ರೌಡಿಶೀಟರ್ ಬಚ್ಚಾ ಅನಾರೋಗ್ಯದ ಹಿನ್ನಲೆ ವೇಳೆ ಮೆಗ್ಗಾನ್‌ಗೆ ಕರೆತರಲಾಗಿತ್ತು. ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆದು ವಾಪಾಸ್ ಹೋಗುವಾಗ ಬೈಪಾಸ್ ರಸ್ತೆಯಲ್ಲಿರುವ ನಾಸೀರ್ ಖಾನ್ ಅವರ ಅಂಗಡಿಗೆ ಬಂದು ಹಣದ ಬೇಡಿಕೆ ಇಟ್ಟಿದ್ದ ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.  


ಈ ಪ್ರಕರಣ ಎರಡು ವರ್ಷದ ಹಿಂದೆ ನಡೆದಿತ್ತು. ಇಲ್ಲಿ ಆರೋಪಿಯ ಕೈವಾಡವಿದೆ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲೇ ತಿಳಿದು ಬರಬೇಕಿದೆ. ಘಟನೆ ನಡೆದಿದ್ದರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ