ಸೋಮವಾರ, ಆಗಸ್ಟ್ 19, 2024

ಕಾಂಗ್ರೆಸ್ ಶಾಸಕನ ಗೆಲುವಿಗೆ ಬಿಜೆಪಿ ಕಟ್ಟಾ ಕಾರ್ಯಕರ್ತನ ಹರಕೆ



ಸುದ್ದಿಲೈವ್/ರಿಪ್ಪನ್‌ಪೇಟೆ 


ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಗೆಲುವಿಗಾಗಿ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತರೊಬ್ಬರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಹರಕೆ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದ ಸನ್ನಿಧಿಗೆ ಆಗಮಿಸಿ ತನ್ನ ಅಭಿಮಾನಿಯೊಂದಿಗೆ ಹರಕೆಯನ್ನು ಸಲ್ಲಿಸಿರುವ ಘಟನೆ ನಡೆದಿದೆ.


ಪಟ್ಟಣದ ಬಿಜೆಪಿ ಕಟ್ಟಾ ಕಾರ್ಯಕರ್ತ ಹರೀಶ್ ಪ್ರಭು ಎಂಬುವರು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರವರ ಗೆಲುವಿಗಾಗಿ ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಸಿದ್ಧಿವಿನಾಯಕ ಸ್ವಾಮಿಗೆ  ಬೆಣ್ಣೆ ಅಲಂಕಾರದ ಸೇವೆಯ ಹರಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಅಭಿಮಾನಿಯೊಂದಿಗೆ  ಪಟ್ಟಣದ ದೇವಸ್ಥಾನಕ್ಕೆ ಆಗಮಿಸಿ ಹರಕೆಯನ್ನು ಸಲ್ಲಿಸಿದ್ದಾರೆ.



ನಂತರ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಹರೀಶ್ ಪ್ರಭು ಕಳೆದ ಮೂವತ್ತು ವರ್ಷಗಳಿಂದ ನಾನು ಸಂಘ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ, ನಾನು ಈಗಲೂ ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತನಾಗಿದ್ದು ನನ್ನ ರಕ್ತದ ನರ ನಾಡಿಗಳಲ್ಲಿ ಬಿಜೆಪಿ ಪಕ್ಷದ ಸಿದ್ಧಾಂತವಿದೆ ಆದರೆ ಶಾಸಕ ಬೇಳೂರು ಗೋಪಾಲಕೃಷ್ಣರವರ ಮಾನವೀಯ ಮೌಲ್ಯಗಳು ಹಾಗೂ ಅವರ ಉಪಕಾರದ ಮನೋಭಾವ ನನ್ನನ್ನು ಪಕ್ಷದ ಚೌಕಟ್ಟನ್ನು ಮೀರಿ ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣರವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡಿದ್ದವು ಈ ಹಿನ್ನೆಲೆಯಲ್ಲಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ಮೊರೆ ಹೋಗಿದ್ದೆನು.


ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪ್ರಚಂಡ ಬಹುಮತದೊಂದಿಗೆ ಗೆಲ್ಲುವುದರೊಂದಿಗೆ ನನ್ನ ಅಭಿಲಾಷೆ ಈಡೇರಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಸಮ್ಮುಖದಲ್ಲಿ ನನ್ನ ಹರಕೆಯನ್ನು ಸಲ್ಲಿಸಿದ್ದೇನೆ ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಯಾಗುವುದರೊಂದಿಗೆ ಇನ್ನಷ್ಟು ಉನ್ನತ ಹುದ್ದೆಗೆ ಏರಲಿ ಎಂದು ಶ್ರೀ ಸ್ವಾಮಿಯಲ್ಲಿ ಮತ್ತೊಮ್ಮೆ ಹರಕೆ ಮಾಡಿಕೊಂಡಿದ್ದೇನೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ