ಮಾಂತ್ರಿಕನ ರೂಪದಲ್ಲಿ ಬಂದು ಮಹಿಳೆಗೆ ಚಿನ್ನಾಭರಣ ವಂಚನೆ



ಸುದ್ದಿಲೈವ್/ಶಿವಮೊಗ್ಗ


ಮಾಟ ಮಂತ್ರ ಬಳಸಿ ಕುಟುಂಬದ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ಮಾಂತ್ರಿಕನ ನೆಪದಲ್ಲಿ ಬಂದು ಮಹಿಳೆಯೊಬ್ಬರಿಗೆ 13,60,000 ರೂ ಮೌಲ್ಯದ ಚಿನ್ನಾಭರಣಗಳನ್ನ ಕಳುವು ಮಾಡಿರುವ ಘಟನೆ ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ನಡೆದಿದೆ.‌


 ಶ್ರೀನಿವಾಸ ಎಂಬ ವ್ಯಕ್ತಿ ಸೋಮಿನಕೊಪ್ಪದ ಭೋವಿ ಕಾಲೋನಿ ನಿವಾಸಿಗಳಿಗೆ  ಭದ್ರಾವತಿಯಲ್ಲಿ ಸಿಕ್ಕಿರುತ್ತಾನೆ.  ಒಬ್ಬರ ಮನೆಗೆ ಹೋಗಿ ಅವರ ಬೆನ್ನನ್ನ ಕೊಯ್ದು ಒಂದು ತಗಡನ್ನು ತೆಗೆದು ನಿಮಗೆ ಮಾಟ ಮಾಡಿದ್ದಾರೆ ಎಂದು ತೋರಿಸಿದ್ದ. ಅದನ್ನು ನೋಡಿದ ಮಹಿಳೆ ನನಗೂ ಆರೋಗ್ಯದಲ್ಲಿ ಸರಿ ಇಲ್ಲ ನಾನು ಸ್ವಲ್ಪ ತೋರಿಸಬೇಕು ಅಂದಿದ್ದಕ್ಕೆ ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಮಹಿಳೆಯ  ವಿಳಾಸವನ್ನು ಪಡೆದುಕೊಂಡಿದ್ದ. 



ಮೇ ತಿಂಗಳಲ್ಲಿ ಮಹಿಳೆಯ ಮನೆಗೆ ಬಂದು ನಿಮ್ಮ ಮನೆಯಲ್ಲಿ ಬಹಳ ತೊಂದರೆ ಇದೆ ಇವುಗಳನ್ನು ಎಲ್ಲ ಪರಿಹಾರ ಮಾಡಿಕೊಡುತ್ತೇನೆ. ಇದು  ಕುಟುಂಬದ ಎಲ್ಲರಿಗೂ ತೊಂದರೆ ಕೊಡುತ್ತೆ ನೀವು ಇದಕ್ಕೆ ಒಡವೆಗಳನ್ನು ಇಟ್ಟು ಪೂಜೆ ಮಾಡಬೇಕು ಎಂದು ನಂಬಿಸಿದ್ದ.


ಇದನ್ನ ನಂಬಿದ ಮಹಿಳೆ ಮನೆಯಲ್ಲಿದ್ದ 34 ತೊಲದ ಒಡವೆಗಳನ್ನು ಆತನಿಗೆ  ಕೊಟ್ಟಿದ್ದಾರೆ.   ನಾನು ಬಾಗಿಲು 'ಹಾಕಿಕೊಂಡು ಪೂಜೆ ಮಾಡುತ್ತೇನೆ. ನೀವು ಯಾರೂ ಬರಬಾರದು ಎಂದು ಅವನೇ ಒಂದು ಪೆಟ್ಟಿಗೆ ತಂದು ಒಡವೆಗಳನ್ನು ಅದರಲ್ಲಿ ಇಟ್ಟು ಪೂಜೆ ಮಾಡಿದ್ದಾನೆ. ನಂತರ 54 ದಿನ ನೀವು ಪೂಜೆ ಮಾಡಿ ನಂತರ ನಾನೆ ಬಂದು ನಿಮ್ಮ ಎಲ್ಲಾ ಒಡವೆಗಳನ್ನ ಕೊಟ್ಟು ಹೋಗುತ್ತೇನೆ. ಎಂದು ಹೇಳಿದ್ದ.


54 ದಿನ ಆದ ನಂತರ ಮಹಿಳೆ ಪೋನ್ ಮಾಡಿದ್ದಾರೆ.  ಬರುತ್ತೇನೆ ಎಂದು ಹೇಳಿದ ಶ್ರೀನಿವಾಸ್ ಮಧ್ಯದಲ್ಲಿ ಮಹಿಳೆಯಿಂದ  ಪೂಜೆಗೆ ಹಣ ಬೇಕು ಎಂದು 50,000 ರೂ.ವನ್ನೂ,  ಮೂರು ಲಕ್ಷ ರೂಪಾಯಿಗಳನ್ನು (3ಲಕ್ಷ)  ಕುರಿ ಕೋಳಿ ಕಡಿಬೇಕು ಎಂದು ಹಣ  ಪಡೆದಿದ್ದಾನೆ. ಇವೆಲ್ಲ, ನಿಮ್ಮ ಒಳ್ಳೆಯದಕ್ಕೆ ಮಾಡುವುದು ಎಂದು ಹೇಳಿದ್ದಾನೆ. 


ದಿನಾಂಕ:23/08/2024 ರಂದು ಪೋನ್ ಮೂಲಕ ಮಾತನಾಡಿದ ಮಹಿಳೆ ನಮಗೆ ಒಡವೆಗಳನ್ನ ಕೊಡಿ ಎಂದು ಕೇಳಿದ್ದು ನಂತರ 24/08/2024 ರಿಂದ ಅವರ ಫೋನುಗಳನ್ನು ಸಹ ಸ್ವೀಕರಿಸುವುದನ್ನ  ನಿಲ್ಲಿಸಿದ್ದಾನೆ.  ಮಾರನೆ ದಿನ ಆತನ ಮೇಲೆ ಅನುಮಾನ ಬಂದು ಪೆಟ್ಟಿಗೆ ಒಡೆದರೆ ಅದರಲ್ಲಿ ನಕಲಿ ಮಾಲುಗಳನ್ನು ತುಂಬಿಸಿದ್ದು ಕಂಡು ಬಂದಿದೆ.  


ಫೋನ್ ಮಾಡಿದರೆ ಆತ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಮಹಿಳೆಗೆ ಆತಂಕವುಂಟಾಗಿದೆ.‌ ಸಾಲ ಮಾಡಿ ಹಣ ಕೊಟ್ಟಿದ್ದು ಕಷ್ಟಪಟ್ಟು ಮಾಡಿಕೊಂಡ ಒಡವೆಗಳನ್ನು ಸಹ ಆತನಿಗೆ ಕೊಟ್ಟಿದ್ದರಿಂದ  ಅವನನ್ನು ಹುಡುಕಿಸಿ ನಮ್ಮ ಒಡವೆ ಹಾಗು ಹಣ ಕೊಡಿಸಿ ಅವನಿಗೆ ಇನ್ನು ಮುಂದೆ ಈ ರೀತಿ ಜನರಿಗೆ ಮೋಸ ಮಾಡದಂತೆ ಕಾನೂನು ಕ್ರಮ ಜರುಗಿಸಬೇಕಾಗಿ ಮಹಿಳೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು