ಸೋಮವಾರ, ಆಗಸ್ಟ್ 19, 2024

ರೇಣುಕಾಂಬ ದೇಗುಲಕ್ಕೆ ಭಕ್ತರ ದಂಡು-ಶ್ರಾವಣ ನೂಲು ಹುಣ್ಣಿಮೆಯ ವಿಶೇಷ ಪೂಜೆ

 


ಸುದ್ದಿಲೈವ್/ಸೊರಬ


ಶ್ರಾವಣ ಮಾಸದ ನೂಲು ಹುಣ್ಣಿಮೆಯ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತಾದಿಗಳು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಮಲೆನಾಡಿನ ಆರಾಧ್ಯ ಶಕ್ತಿ ದೇವತೆಯಾದ ಶ್ರೀ ರೇಣುಕಾಂಬೆಯ ದರ್ಶನ ಪಡೆಯಲು ಶಿವಮೊಗ್ಗ ಸೇರಿದಂತೆ ವಿವಿಧ ಹೊರಜಿಲ್ಲೆಗಳಿಂದ ಭಕ್ತರು ದೇವಳಕ್ಕೆ ಬಂದು 'ಉದೋ ಉದೋ' ಎನ್ನುವ ಗೋಶದೊಂದಿಗೆ ಭಕ್ತಿ ಸಮರ್ಪಿಸಿದರು. 


ವಿಶೇಷ ಪೂಜೆಯಲ್ಲಿ ಪರಿವಾರ ದೇವತೆಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರುಶುರಾಮ, ತ್ರಿಶೂಲ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಹೆಸರಿನಲ್ಲಿ ಧಾರ್ಮಿಕ ಸೇವೆ ಹಾಗೂ ಹರಕೆಗಳನ್ನು ಅರ್ಪಿಸಿದರು.


ತೀವ್ರ ಮಳೆಯಿಂದಾಗಿ ಸ್ವಲ್ಪಕಾಲ ಭಕ್ತರಿಗೆ ತೊಂದರೆ ಉಂಟಾದರೂ, ಭಕ್ತರ ಸಂಖ್ಯೆ ಕಡಿಮೆಯಾಗದೆ, ದೇವಾಲಯದ ವಾತಾವರಣ ಭಕ್ತಿಮಯವಾಗಿ ಕಂಗೊಳಿಸಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ, ರಥ ಬೀದಿಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು. 


ಪೊಲೀಸ್ ಇಲಾಖೆಯಿಂದ ಭಕ್ತರ ಸುರಕ್ಷತೆಗಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು, ಭಕ್ತರ ದರ್ಶನ ಶಾಂತಿಯುತವಾಗಿ ನೆರವೇರಿತು.


ವರದಿ ಮಧು ರಾಮ್  ಸೊರಬ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ