ಮೃತ ಚಂದ್ರಶೇಖರನ್ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ಪರಿಹಾರ ನೀಡಲು ರಾಷ್ಟ್ರಭಕ್ತರ ಬಳಗ ಆಗ್ರಹ

 


ಸುದ್ದಿಲೈವ್/ಶಿವಮೊಗ್ಗ


ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ಸರ್ಕಾರ ಘೋಷಸಿದ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಂದು ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದ ರಾಷ್ಟ್ರಭಕ್ತರ ಬಳಗ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿತು. 


ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾರೋ ಮಾಡಿದ ಅವ್ಯವಹಾರವನ್ನು ತನ್ನ ತಲೆಗೆ ಕಟ್ಟಲು ಮಾಡಿದ ಷಡ್ಯಂತ್ರದಿಂದ ಮನ ನೊಂದು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  


ನಿಗಮದ ಪ್ರಾಮಾಣಿಕ ಅಧಿಕಾರಿ  ಚಂದ್ರಶೇಖರನ್ ಅವರ ಕುಟುಂಬಕ್ಕೆ ಪರಿಹಾರವಾಗಿ 25.00.000-00 (ಇಪ್ಪತ್ತೈದು ಲಕ್ಷ) ರೂಪಾಯಿಗಳನ್ನು ಕೊಡುವುದಾಗಿ ಸರ್ಕಾರ ವಿಧಾನ ಸಭೆಯಲ್ಲಿಯೇ ಘೋಷಿಸಿತ್ತು. ಆದರೆ ಪರಿಹಾರದ ಹಣ ಇದುವರೆಗೂ ಅವರ ಕುಟುಂಬಕ್ಕೆ ತಲುಪಿಲ್ಲ. 


ಮೃತರ ಕುಟುಂಬ ಕಡು ಬಡತನದಿಂದ ಜೀವಿಸುತ್ತಿದ್ದು ಮಕ್ಕಳ ವಿದ್ಯಭ್ಯಾಸ ಹಾಗು ದಿನ ನಿತ್ಯದ ಕುಟುಂಬ ನಿರ್ವಹಣೆ ಮಾಡಲಾಗದೆ ಚಂದ್ರಶೇಖರನ್ ಅವರ ಪತ್ನಿ ಕವಿತಾ ಅವರು ತಮ್ಮ ತಾಯಿಯ ಮನೆಯಲ್ಲಿ ಆಶ್ರಯ ಪಡೆದಿರುವ ಕರುಣಾಜನಕ ಸ್ಥಿತಿಯಲ್ಲಿದೆ. 


ಆದ್ದರಿಂದ ಸರ್ಕಾರ ಘೋಷಿಸಿದ 25 ಲಕ್ಷ ರೂಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಿ ಅವರ ಕುಟುಂಬಕ್ಕೆ ನೆರವಾಗಬೇಕೆಂದು ಆಗ್ರಹಿಸಿದೆ. ಮನವಿ ನೀಡುವ ವೇಳೆ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್, ಮೃತ ಚಂದ್ರಶೇಖರನ್ ಪತ್ನಿ ಕವಿತಾ, ಮಾಜಿ ಕಾರ್ಪರೇಟರ್ ಗಳಾದ ಇ.ವಿಶ್ವಾಸ್, ಸುವರ್ಣ ಶಂಕರ್, ಶಂಕರ್ ಗನ್ನಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು