ಬುಧವಾರ, ಆಗಸ್ಟ್ 14, 2024

ಎಮ್ಮೆಹಟ್ಟಿ ಆಯಿತು, ಈಗ ಕೂಡ್ಲಿಗೆರೆಯಲ್ಲಿ ಕರಡಿ ದಾಳಿ



ಸುದ್ದಿಲೈವ್/ಭದ್ರಾವತಿ


ಇಲ್ಲಿಗೆ ಸಮೀಪದ ಕೂಡ್ಲಿಗೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಅವರಿಗೆ ಪರಚಿದ ಗಾಯಗಳಾಗಿರುವ ಘಟನೆ ನಡೆದಿದೆ.ಗಾಯಾಳುವನ್ನು ಗ್ರಾಮದ ಮೋಹನ್(36) ಎಂದು ಗುರುತಿಸಲಾಗಿದೆ.


ಗ್ರಾಮದಲ್ಲಿರುವ ಮನೆಯೊಂದರಲ್ಲಿ ಕೃಷಿ ಸಾಮಾನು ಸರಂಜಾಮು ಸಂಗ್ರಹ ಮಾಡಿರುವ ಮನೆಗೆ  ನಿನ್ನೆ ರಾತ್ರಿ 11.30ರ ವೇಳೆಗೆ ಮೋಹನ್  ಬಂದಿದ್ದಾರೆ. ಆದರೆ, ಈ ಮುನ್ನವೇ ಮನೆಯೊಳಗೆ ಸೇರಿಕೊಂಡಿದ್ದ ಕರಡಿ ಏಕಾಏಕಿ ಮೋಹನ್ ಮೇಲೆ ದಾಳಿ ನಡೆಸಿದೆ.


ಕರಡಿ ದಾಳಿಯಿಂದ ಗಾಬರಿಯಾದರೂ ಹೆದರದ ಮೋಹನ್, ಅದರೊಂದಿಗೆ ಸೆಣೆಸಾಡಿದ್ದಾರೆ. ಛಲಬಿಡದೇ ಕರಡಿಯೊಂದಿಗೆ ಹೋರಾಡಿದ್ದು, ಅದನ್ನು ಎತ್ತಿ ಬಿಸಾಡಿದ್ದಾರೆ. ಇದರಿಂದ ಹೆದರಿದ ಕರಡಿ ಅರಣ್ಯ ಪ್ರದೇಶದ ಕಡೆ ಓಡಿಹೋಗಿದೆ.

ಕರಡಿಯೊಂದಿಗೆ ಹೋರಾಡುವ ವೇಳೆ ಮೋಹನ್ ಅವರ ಬೆನ್ನು ಹಾಗೂ ಕೈಗೆ ಪರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.


ಬಾರದ ಅರಣ್ಯಾಧಿಕಾರಿಗಳು, ಜನರ ಆಕ್ರೋಶ


ಗ್ರಾಮದ ಒಳಭಾಗದಲ್ಲಿಯೇ ಕರಡಿ ಕಾಣಿಸಿಕೊಂಡು ಓರ್ವರ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯ ಹಾಗೂ ತಾಲೂಕು ಅರಣ್ಯಾಧಿಕಾರಿಗಳಿಗೆ ಇಂದು ಮುಂಜಾನೆಯೇ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರೈತ ಸಂಘದ ಹಸಿರುಸೇನೆ ಕಾರ್ಯದರ್ಶಿ ಮೋಹನ್ ಅವರು, ಘಟನೆ ಕುರಿತಂತೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರು ತೋಟಗಳಿಗೆ ಹಾಗೂ ಹೊರಕ್ಕೆ ತೆರಳಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಭದ್ರಾವತಿ ತಾಲೂಕು ಎಮ್ಮೆಹಟ್ಟಿಯಲ್ಲಿ ಭಾನುವಾರ ಬೆಳಿಗ್ಗೆ ಬಹಿರ್ದೆಸೆಗೆ ತೆರಳಿದ ವೇಳೆ ಕರಡಿ ದಾಳಿ ನಡೆಸಿತ್ತು. ಮೂರು ದಿನಗಳ ನಂತರ ಕೂಡ್ಲಿಗೆರೆ ಭಾಗದಲ್ಲಿ ಕರಡಿ ದಾಳಿನಡೆಸಿದೆ. ಅಲ್ಲೆ ಹೊಳೆಹೊನ್ನೂರು ಭಾಗದಲ್ಲಿ ಕೆಲವೆಡೆ ಕರಡಿ ಕಾಣಿಸಿಕೊಂಡಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ