ಶುಕ್ರವಾರ, ಆಗಸ್ಟ್ 2, 2024

108 ಆಂಬುಲೆನ್ಸ್ ಸಿಬ್ಬಂದಿಗಳ ಬೇಜವಾಬ್ದಾರಿತನ!? ನಿರಾಶ್ರಿತರ ಆಕ್ರೋಶ!



ಸುದ್ದಿಲೈವ್/ತೀರ್ಥಹಳ್ಳಿ 


ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಅಲ್ಲಿನ ಬೆಂಗಳೂರು 108 ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ ಸಂಜೆ ನಡೆದಿದೆ.


ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಪ್ರವಾಹ ಬಂದ ಹಿನ್ನಲೆಯಲ್ಲಿ ಕುರುವಳ್ಳಿಯ ಜಯಚಾಮರಾಜೇಂದ್ರ ತುಂಗಾ ಸೇತುವೆ ಪಕ್ಕ ವಾಸಿಸುವ ತುಂಗಾ ಕಾಲೋನಿ ನಿವಾಸಿಗಳನ್ನು ಪಟ್ಟಣದ ಕೆ ಟಿ ಕೆ ಕಲ್ಯಾಣ ಮಂಟಪ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾಳಜಿ ಕೇಂದ್ರದ ನಿರಾಶ್ರಿತರಲ್ಲಿ 9 ತಿಂಗಳು ತುಂಬಿದ ಗರ್ಭಿಣಿ ಮಹಿಳೆ ಇದ್ದು ಅವರಿಗೆ ತಿವ್ರ ತರದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ ಗೆ ಅಲ್ಲೇ ಇದ್ದವರು ಕರೆ ಕೂಡ ಮಾಡಿದ್ದಾರೆ. 


ಕರೆ ಮಾಡಿ 45 ನಿಮಿಷ ವಾದರೂ ಆಂಬುಲೆನ್ಸ್ ಬಂದಿಲ್ಲ . ನಂತರ ಪುನಃ ಮತ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ತೀರ್ಥಹಳ್ಳಿ ಎಲ್ಲಿ ಬರುತ್ತೆ? ಕೆ.ಟಿ.ಕೆ ಎಲ್ಲಿ ಬರುತ್ತೆ... ? ಯಾವ ಊರು?  ನೀವು ಹೇಳಿದಲ್ಲಿಗೆ ಬರಲು ಆಗುವುದಿಲ್ಲ,  ಒಂದು ಘಂಟೆ ಕಾಯಿರಿ ಎಂದು ಬೇಜವಾಬ್ದಾರಿ ಮಾತನ್ನು ಬೆಂಗಳೂರು 108 ಆಂಬುಲೆನ್ಸ್ ಸಿಬ್ಬಂದಿಗಳು ಹೇಳಿದ್ದಾರೆ. ಆಂಬುಲೆನ್ಸ್ ಬಾರದ ಕಾರಣ ಮಹಿಳೆಗೆ ಹೊಟ್ಟೆ ತುಂಬಾ ನೋವಾಗಿ ವದ್ದಾಡುತ್ತಾ ಇರುವಾಗ ಅಲ್ಲಿನ ನಿರಾಶ್ರಿತರು ಏನಾದರೂ ಅವಗಢ ಆದ  ಮೇಲೆ ಅಂಬುಲೆನ್ಸ್ ನವರು ಬರ್ತಾರಾ?  ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಬಗ್ಗೆ ಜಯಚಾಮರಾಜೇಂದ್ರ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳು ಗಮನಿಸಿ ಮುಂದೆ ಈ ರೀತಿ ಆಗದಂತೆ ಜನರ ಕಷ್ಟಕ್ಕೆ ಸ್ಪಂದನೆ ಮಾಡುವಂತೆ 108 ಬೆಂಗಳೂರು  ಆಂಬುಲೆನ್ಸ್ ಸಿಬ್ಬಂದಿಗಳಿಗೆ ತಿಳಿ ಹೇಳಬೇಕಿದೆ.


ಮಾನವೀಯತೆ ಮೆರೆದ ಕಂದಾಯ ಇಲಾಖೆ ಅಧಿಕಾರಿ ಸುಧೀರ್ 

ಕಂದಾಯ ಅಧಿಕಾರಿ ಸುಧೀರ್


ಈ ವೇಳೆ ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅಧಿಕಾರಿಗಳು ನಿರಾಶ್ರಿತರಿಗೆ ಕಾಫಿ, ಟೀ ಕೊಡಲು ತಾವೇ ಖುದ್ದಾಗಿ ಕೆ.ಟಿ.ಕೆ  ಕಲ್ಯಾಣ ಮಂಟಪಕ್ಕೆ ಬಂದಿದ್ದ  ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ರವರು ಮಹಿಳೆ ಹೊಟ್ಟೆ ನೋವೂ ತಾಳಲಾರದೆ ವದ್ದಾಡುವುದನ್ನು ನೊಡಿ ತಕ್ಷಣ ತಡಮಾಡದೇ 108 ವಾಹನ ಕಾಯದೆ ತಮ್ಮ ಕಾರಿನಲ್ಲಿ ಗರ್ಭಿಣಿ ಮಹಿಳೆಯನ್ನು ಕೂರಿಸಿಕೊಂಡು  ಹೋಗಿ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ಬಿಟ್ಟಿದ್ದಾರೆ. ತಕ್ಷಣ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ಅವರ ಮಾನವೀಯತೆಗೆ ಅಲ್ಲಿದಂತಹವರು ಸಂತಸ ಪಟ್ಟು ಧನ್ಯವಾದಗಳನ್ನು ತಿಳಿಸಿದ್ದಾರೆ.


ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳಾದ ಮೋಹನೇಶ್ ಮತ್ತು ಲೋಕೇಶ್ ಕೂಡ ಜೊತೆಯಲ್ಲಿ ಇದ್ದರು. ಈ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ನಿನ್ನೆ ಸಂಜೆ ಮಹಿಳೆಗೆ ಹೆರಿಗೆ ಆಗಿದ್ದು ತಾಯಿ ಮತ್ತು ಮಗು ಇಬ್ಬರ ಆರೋಗ್ಯವಾಗಿದ್ದು ಕಾಳಜಿ ಕೇಂದ್ರದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ