ಶಂಕಿತ ಡೇಂಗೇ ಜ್ವರಕ್ಕೆ ರಿಪ್ಪನ್ ಪೇಟೆಯ ಯುವಕ ಬಲಿ?ಪಿಎಸ್ಐನಿಂದ ಮೆಡಿಕಲ್ ಶಾಪ್ ಗಳಿಗೆ ಖಡಕ್ ಎಚ್ಚರಿಕೆ

ಸುದ್ದಿಲೈವ್/ರಿಪ್ಪನ್ ಪೇಟೆ

ರಿಪ್ಪನ್‌ಪೇಟೆಯ ಯುವಕನೋರ್ವ ಸಾವನ್ನಪ್ಪಿದ್ದು ಶಂಕಿತ ಡೇಂಗ್ಯೂವಿಗೆ ಬಲಿಯಾಗಿರುವುದಾಗಿ ತಿಳಿದುಬಂದಿದೆ. ಇದರಿಂದಾಗಿ ಒಂದೇ ವಾರದಲ್ಲಿ ರಿಪ್ಪನ್ ಪೇಟೆಯಲ್ಲಿ ಶಂಕಿತ ಮಹಾಮಾರಿಗೆ ಎರಡನೇ ಬಲಿಯಾಗಿರುವುದಾಗಿ ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಹೋಬಳಿಯಲ್ಲಿ ಶಂಕಿತ ಮಹಾಮಾರಿ ಡೆಂಘೀ ಜ್ವರ ಮರಣ ಮೃದಂಗ ಬಾರಿಸುತ್ತಿದೆ.  ಒಂದೇ ವಾರದಲ್ಲಿ ಇಬ್ಬರನ್ನು ಬಲಿಪಡೆದಿದೆ. ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಆಶಿಕ್ ರಸೂಲ್ (27) ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಶನಿವಾರದಿಂದ ಜ್ವರದಿಂದ ಬಳಲುತಿದ್ದ ಆಶಿಕ್ ರಸೂಲ್ ರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಸಾವು ಕಂಡಿದ್ದಾನೆ.‌ ಹೊಸನಗರ ರಸ್ತೆಯ ರಾಯಲ್ ಕಂಫರ್ಟ್ ಲಾಡ್ಜ್ ಮುಂಭಾಗದಲ್ಲಿ ಆಶಿಕ್ ರಸೂಲ್ ಬದ್ರಿಯಾ ಮೊಬೈಲ್ ಸೆಂಟರ್ ಎಂಬ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು.

ಜ್ವರದ ಲಕ್ಷಣ ಕಾಣಿಸಿಕೊಂಡು ಕೇವಲ ಮೂರೇ ದಿನಗಳ ಅಂತರದಲ್ಲಿ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ಹಿನ್ನಲೆಯಲ್ಲಿ ಇಂದು ಸಂಜೆ ಸಾವು ಕಂಡಿರುವುದಾಗಿ ತಿಳಿದು ಬಂದಿದೆ.

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಒಂದೇ ವಾರದ ಅಂತರದಲ್ಲಿ ರಶ್ಮಿ ನಾಯಕ್ ಎಂಬವವರು ಶಂಕಿತ ಡೆಂಘೀ ಜ್ವರದಿಂದ  ಮೃತಪಟ್ಟಿದ್ದರು.

ಡೇಂಗೇ ಹೆಚ್ಚಳಕ್ಕೆ ಪಿಎಸ್ ಐ  ಎಚ್ಚರಿಕೆ

ರಿಪ್ಪನ್‌ ಪೇಟೆಯ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮರಣ ಮೃದಂಗ ಬಾರಿಸುತಿದ್ದು ಈಗಾಗಲೇ ಒಬ್ಬರು ಸಾವನ್ನಪ್ಪಿ ನೂರಕ್ಕೂ ಹೆಚ್ಚು ಜನ ಡೆಂಗ್ಯೂ ಜ್ವರದಿಂದ ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಸಾಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪಟ್ಟಣದ ಎಲ್ಲ ಖಾಸಗಿ ಮೆಡಿಕಲ್ ಶಾಪ್ ಗಳಿಗೆ ತೆರಳಿ ವೈದ್ಯರ ಚೀಟಿಯಿಲ್ಲದೇ ಜ್ವರ ಸಂಬಂಧಿತ ಖಾಯಿಲೆಗಳಿಗೆ ಔಷಧ ನೀಡದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಡೆಂಗ್ಯೂ ಲಕ್ಷಣವಿರುವ ರೋಗಿಗಳು ಪಟ್ಟಣದ ಮೆಡಿಕಲ್ ನಲ್ಲಿ ಜ್ವರದ ಮಾತ್ರೆ ತಿಂದು ಆ ಕ್ಷಣಕ್ಕೆ ಗುಣಮುಖರಾಗಿ ಮಾರನೇ ದಿನ ಮತ್ತೆ ಜ್ವರ ಕಾಣಿಸಿಕೊಂಡು ಮತ್ತೆ ಮೆಡಿಕಲ್ ಗೆ ಮಾತ್ರೆಗೆ ಮೊರೆ ಹೋಗುತ್ತಿದ್ದಾರೆ.

ಕೊನೆಗೆ ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ನಂತರ ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂ ಜ್ವರಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ವೈದ್ಯರ ಚೀಟಿಯಿಲ್ಲದೇ ಔಷಧ ನೀಡಬೇಡಿ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ವಾರ್ನಿಂಗ್ ನೀಡಿದ್ದಾರೆ.

ಆರೋಗ್ಯ ಇಲಾಖೆಯಿಂದಲೂ ಪಟ್ಟಣ ವ್ಯಾಪ್ತಿಯ ಎಲ್ಲಾ ಖಾಸಗಿ ಕ್ಲಿನಿಕ್ , ಲ್ಯಾಬ್ ಹಾಗೂ ಮೆಡಿಕಲ್ ಶಾಪ್ ಗಳಿಗೆ ನೋಟೀಸ್ ಜಾರಿ ಮಾಡಿದ್ದು ಜ್ವರಕ್ಕೆ ಸಂಬಂಧಿಸಿದ ರೋಗಿಗಳ ಬಗ್ಗೆ ತತ್ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ ಹಾಗೂ ಮಧುಸೂಧನ್ ಇದ್ದರು.

ಇದನ್ನೂ ಓದಿ-https://suddilive.in/archives/19487

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket