ನಾನು ಪ್ರಮಾಣಿಕ, ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟೆಲೆ ಹಣತಂದೆ ಎನ್ನುವ ಶಾಸಕರು ಕಳಪೆ ಕಾಮಗಾರಿ ಬಗ್ಗೆ ಉತ್ತರಿಸಲಿ -ಆರ್ ಎಂ ಎಂ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಪಟ್ಟಣದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಕೋಟಿ, ಕೋಟಿ ವೆಚ್ಚದ ಗ್ರಾಮೀಣಾಭಿವೃದ್ಧಿ ಭವನ ಕಟ್ಟಡ, ಪೋಲಿಸ್ ಇಲಾಖೆ ಕಟ್ಟಡ,ಅಗ್ನಿಶ್ಯಾಮಕ ದಳ ನೂತನ ಕಟ್ಟಡಗಳು ಸೋರುತ್ತಿದೆ, ಕಳಪೆ ಕಾಮಗಾರಿ ನೆಡೆಸಿದ ಗುತ್ತಿಗೆದಾರರು, ಇಂಜಿನಿಯರ್ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಉತ್ತರಿಸಲಿ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಈ ಬೃಹತ್ ಭ್ರಷ್ಟಾಚಾರದ ಈ ಸಂಬಂಧ ಸಂಬಂಧಪಟ್ಟ ಮಂತ್ರಿಗಳನ್ನು ನಾಳೆ ಭೇಟಿ ಮಾಡಿ ತನಿಖೆ ನೆಡೆಸಲು ಆಗ್ರಹಿಸುತ್ತೇನೆ ಎಂದ  ಆರ್.ಎಂ.ಮಂಜುನಾಥ್ ಗೌಡರು ನಾನು ಪ್ರಾಮಾಣಿಕ, ಇಷ್ಟು ಕೋಟಿ ಅಭಿವೃದ್ಧಿಗೆ ಹಣ ತಂದೆ ಎನ್ನುವ ಕ್ಷೇತ್ರದ ಶಾಸಕರು ತಮ್ಮ ಬೆಂಬಲಿಗ ಗುತ್ತಿಗೆದಾರ ನೆಡೆಸಿದ ಕಳಪೆ ಕಾಮಗಾರಿ ಬಗ್ಗೆ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಕಳೆದ ವರ್ಷ ಉದ್ಘಾಟನೆಗೊಂಡ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಕಟ್ಟಡವು ಸೋರುತಿದೆ,ರಾಷ್ಟ್ರೀಯ ಹೆದ್ದಾರಿಯಾದ ಭಾರತೀಪುರದಲ್ಲಿ ರಸ್ತೆ ಕಾಮಗಾರಿಯ ಹೆಸರಿನಲ್ಲಿ ಮರಗಳನ್ನು ಕಡಿದು ಮಾರಣಹೋಮವಾಗಿದೆ. ಕಳೆದ ಎರಡು ದಿನಗಳಲ್ಲಿ ಭೂ ಕುಸಿತ ಉಂಟಾಗಿದೆ,ಅಭಿವೃದ್ದಿಯ ಹೆಸರಿನಲ್ಲಿ ಕಳಪೆ ಕಾಮಗಾರಿ ನೆಡೆದಿದೆ,ತಕ್ಷಣವೇ ಈ ಎಲ್ಲಾ ಕಳಪೆ ಕಾಮಗಾರಿಯ ಬಗ್ಗೆ ಸರ್ಕಾರದಿಂದ ತನಿಖೆ ಆಗಬೇಕೆಂದು ಒತ್ತಾಯಿಸಿದರು.

 ಬಿಜೆಪಿ ಸುಳ್ಳಿನ ವ್ಯಾಪಾರಿ

ಸುಳ್ಳಿನ ವ್ಯಾಪಾರಿಗಳಾಗಿರುವ ಬಿಜೆಪಿಯವರಿಗೆ ಕ್ಷೇತ್ರದಲ್ಲಿ ನೆಡೆದ ಕಳಪೆ ಕಾಮಗಾರಿಯ ಭ್ರಷ್ಟಾಚಾರ ಕಾಣುತ್ತಿಲ್ಲವೇ..? ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಕಾಮಗಾರಿ ನೆಡೆಸಿ ಭ್ರಷ್ಟಾಚಾರ ದಲ್ಲಿ ತೊಡಗಿರುವ ಬಿಜೆಪಿ ಬೆಂಬಲಿಗರ ವಿರುದ್ಧ ಸಿ,ಓ.ಡಿ ತನಿಖೆಯೋ,ಲೋಕಾಯುಕ್ತ ತನಿಖೆಯೋ ನೆಡೆಯಬೇಕು ಕೂಡಲೇ ನಾನು ಸಂಬಂಧ ಪಟ್ಟ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ ,ಈ ಕಳಪೆ ಕಾಮಗಾರಿಯ ಭ್ರಷ್ಟಾಚಾರದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ಆಗಬೇಕು ಎಂದರು.

ಯಾವುದೇ  ಗುತ್ತಿಗೆದಾರರೊಂದಿಗೆ, ಬಿಜೆಪಿಯವರೊಂದಿಗೆ ಹೊಂದಣಿಕೆಯ ಒಳ ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ, ಚುನಾವಣಾ ಸಮಯದಲ್ಲಿ ಗುತ್ತಿಗೆದಾರರ ಹತ್ತಿರ ಭಿಕ್ಷಾಪಾತ್ರೆ ಹಿಡಿದು ಹೋಗುವ ಕೆಲವು ರಾಜಕಾರಣಿಗಳಂತಹ ಜಾಯಮಾನ ನನ್ನದ್ದಲ್ಲ , ಪ್ರಾಮಾಣಿಕ ನಾನು,ಐದುಗೆದ್ದಿದ್ದೇನೆ ಎನ್ನುವ ಕ್ಷೇತ್ರದ ಶಾಸಕರು ಕ್ಷೇತ್ರದ ಜನರಿಗೆ ಉತ್ತರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ನೀರಾವರಿ ನಿಗಮದ ಹಣದಿಂದ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಿಸಿದ ಜಿಲ್ಲೆಯ ಸಂಸದರು ಕೇಂದ್ರ ಸರ್ಕಾರದ ಹಣ ಎನ್ನುತ್ತಾರೆ,ಚುನಾವಣಾ ಸಮಯದಲ್ಲಿ ಸುಳ್ಳು ಹೇಳುತ್ತ ಪ್ರಚಾರ ನೆಡೆಸಿದ್ದಾರೆ, ಎಂದರು.

 ಆರ್ ಎಂ ಎಂ ಬೇಸರ

ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗುರ್ ಹುಕುಂ ಸಾಗುವಳಿದಾರರಿಗೆ ಇದುವರೆಗೂ ಹಕ್ಕು ಪತ್ರ ಕೊಡಿಸುವಲ್ಲಿ ವಿಫಲರಾಗಿರುವ ಸಂಸದ ರಾಘವೇಂದ್ರ, ಚುನಾವಣೆಯಲ್ಲಿ ನಮ್ಮ ಸರ್ಕಾರ ಬಂದರೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೆ ನೀಡಿದ್ದರು. ಕಳೆದ 15 ವರ್ಷದಿಂದ ಇಲ್ಲಿನ ಸಂಸತ್ ಸದಸ್ಯರು ಗೆದ್ದು ಬರುತ್ತಿದ್ದಾರೆ. ಇವರ ತಂದೆ ಸಿಎಂ ಆಗಿ ಸಂಸತ್ ಸದಸ್ಯರೂ ಆಗಿದ್ದಾರೆ. ಆದರೂ ಎರಡೂ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ.

ಇವು ಯಾವುವು ಚುನಾವಣೆಯಲ್ಲಿ ಪ್ರಭಾವ ಬೀರೊಲ್ಲ. ಮತ್ತೆ ಇವರೇ 2.5 ಲಕ್ಷ ಮತಗಳಿಂದ ಗೆದ್ದು ಬಂದಿದ್ದಾರೆ. ನೂರಾರು ವರ್ಷದ ಮರಗಳನ್ನ ಅಭಿವೃದ್ಧಿ ವಿಚಾರದಲ್ಲಿ ಅಡ್ಡಬಂದರೆ ಉಳಿಸುವ ಪ್ರಯತ್ನ ಮಾಡಲಾಗುತ್ತದೆ. ನೂರಾರು ವರ್ಷಗಳಿಂದ ಬಾಳಿ ಬದುಕಿಕೊಂಡು ಬಂದ ಮನುಷ್ಯರಿಗೆ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇವರನ್ನೇ ಜನ ಮತ್ತೆ ಆಯ್ಕೆ ಮಾಡುತ್ತಾರೆ ಇದಕ್ಕೆ ಏನು ಹೇಳೋಣ ಎಂದು ಬೇಸರ ವ್ಯಕ್ತಪಡಿಸಿದರು.

ಈ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಸ್ತೂರ್ ಮಂಜುನಾಥ್, ಡಿ.ಎಸ್.ವಿಶ್ವನಾಥ್ ಶೆಟ್ಟಿ,ಟಿ.ಎಲ್.ಸುಂದ್ರೇಶ್,ಶಚೀಂದ್ರ ಹೆಗಡೆ,ದುಗ್ಗಪ್ಪ ಗೌಡ, ಜೀನಾ ಡಿಸೋಜಾ, ಯಲ್ಲಪ್ಪ, ಹಾ.ಪಧ್ಮನಾಭ್, ಗೀತಾ ರಮೇಶ್, ಅಜಾದಿ ,ರತ್ನಾಕರ ಶೆಟ್ಟಿ ಮುಂತಾದವರಿದ್ದರು.

ಇದನ್ನೂ ಓದಿ-https://suddilive.in/archives/19577

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು